Sunday, May 27, 2007

...ಯಡ್ಡಿ ಸಾಹೇಬ್ರು ಧರ್ಮ ಧೀಕ್ಷೆ ತೊಗೋತಾರಂತೆ!

ಸುಮ್ನೇ ನನ್ನಷ್ಟಕ್ಕೆ ನಾನು ಕಾಫಿ ಕುಡೀತಾ ಕೂತಿರೊ ಒಂದು ಒಳ್ಳೇ ಸಂಜೇ ಹೊತ್ನಲ್ಲಿ ತಮ್ ತಮ್ಮೊಳಗೆ ಜಗಳಾ ಆಡಿಕೊಂಡು ಯಾವುದೇ ಒಪ್ಪಂದಕ್ಕೆ ಬರದ ಕಾಲೇಜು ಹುಡುಗ್ರ ಹಾಗೆ ಮಾತಿಗೆ ಮಾತ್ ಬೆಳಸ್ಕೊಂಡು ನನ್ನಿಂದ ಸ್ವಲ್ಪ ದೂರದಲ್ಲೇ ಕೂತಿರೋ ನಂಜಾ-ಕೋಡೀಹಳ್ಳಿ ಮೆಷ್ಟ್ರು ಕಾಂಬಿನೇಷನ್ನ್ ನನ್ನ ಗಮನಾ ಸೆಳೀತು.

’ನಮ್ ಯಡಿಯೂರಪ್ನೋರು ಮಠದ್ ಸ್ವಾಮಿಗಳಾಗ್ತರಂತೆ!’ ಎಂದು ಕಟ್ಟಿದ ಮೂಗನ್ನು ಒಳಕ್ಕೇರಿಸಿಕೊಂಡು ನಂಜಾ ಮೆಷ್ಟ್ರು ಕಡೆ ನೋಡಿದಾಗಲೇ ಏನೋ ಉಡಾಫೆ ನಡೆದುಹೋಗುತ್ತಿರುವುದನ್ನು ಗಮನಿಸಿದ ಮೇಷ್ಟ್ರು ಇನ್ನು ಸುಮ್ಮನ್ನಿದ್ದರೆ ಎಲ್ಲಿ ಒಪ್ಪಿಕೊಂಡಂತಾಗುತ್ತದೆಯೋ ಎಂದು,

’ಸುಮ್ನಿರೋ, ಕತ್ಲ್ ಆಗ್ತಾ ಇದ್ದಂಗೆ ಜಾಸ್ತಿ ನಗಸ್‌ಬೇಡ!’ ಎನ್ನಲು, ನಂಜ ಇದ್ದೋನು,

’ನಾನ್ ಹೇಳೋದು ಸುಳ್ಳಲ್ಲಾ ಸ್ವಾಮೀ, ನೀವೇ ಬನ್ನಿ ಇಲ್ಲಿ ಕೇ ಆರ್ ಪ್ಯಾಟಿನಾಗೆ ಅವ್ರೇ ಕೊಟ್ಟಿರೋ ಹೇಳ್ಕೆ ಕೇಳ್ಕಳ್ಳಿ...’ ಎನ್ನುವ ಆಹ್ವಾನವನ್ನು ತಿರಸ್ಕರಿಸುವ ಮಾತೇ ಇಲ್ಲದ ಮೇಷ್ಟ್ರು ಆಗಲೇ ನಂಜನ ಬೆನ್ನ ಮೇಲಿನಿಂದ ಕಪ (ಕನ್ನಡಪ್ರಭ)ವನ್ನು ನೋಡಲು ಶುರುಮಾಡಿ ಆಗಿತ್ತು.

’ಒಂದ್ ವಿಷ್ಯಾ ಗೊತ್ತಾ ನಿಂಗೆ, ಯಡಿಯೂರಪ್ಪ ಅಧಿಕಾರ ಶಾಶ್ವತಾ ಅಲ್ಲ ಅನ್ನೋ ಮಾತನ್ನು ಹೇಳ್‌ಬೇಕಾದ್ರೆ ಏನೋ ಬಲವಾದ ಕಾರ್ಣ ಇರ್ಲೇ ಬೇಕು, ಶುಕ್ರವಾರದ್ ದಿನ ಅವರ ಬಾಸಿನ್ ಜೊತೆ ಏನ್ ಜಗಳ ಮಾಡ್ಕ್ಯಂಡಾರೋ ಯಾರಿಗೆ ಗೊತ್ತು?’

’ಓ, ಇಲ್ ನೋಡಿ ಮೇಷ್ಟ್ರೇ, ಅನ್ಯ ಸಂಸ್ಕೃತಿ ಪ್ರೀತ್ಸೋದೇ ಅವರ ಬದುಕಿನ ಮಂತ್ರವಂತೇ, ಅದೂ ಮೂಲಮಂತ್ರವಂತೇ...ಇವರಿಗೂ ಏನಾರೂ ನಮ್ ಎನ್ನಾರೈ ಸಂಸ್ಕೃತಿ ಗಾಳಿ ಬೀಸ್ತೋ ಏನೋ ಯಾವನಿಗ್ ಗೊತ್ತು?’ ಎಂದು ನಂಜ ಹೌಹಾರಿದ್ದನ್ನು ನೋಡಿ ನಾನು ನಿಜವೇನೋ ಎಂದು ಅಂದುಕೊಳ್ಳಬೇಕು ಅಷ್ಟರಲ್ಲಿ ಮೇಷ್ಟ್ರು ನನ್ನ ರಕ್ಷಣೆಗೆ ಬಂದರು,

’ತತ್ತಾರ್ಲೇ, ಸ್ವಾಮಿಗೋಳ್ ಮುಂದ್ ಕೂತಗೊಂಡು ಈ ನನ್ ಮಕ್ಳೂ ಹಂಗ್ ಮಾಡ್ರಿ, ಹಿಂಗ್ ಮಾಡ್ರಿ ಅಂತಾರೇ ವಿನಾ ಇಂತೋರ್ ಉದ್ದಾರ ಮಾಡಿದ್ದಕ್ಕೇ ಅಲ್ವಾ ಮಳೇ ಬೆಳೇ ಅಗ್ತಾ ಇರೋದಲ್ವಾ ಜಗತ್ತಿನಲ್ಲಿ!’ ಎಂದು ಮೇಷ್ಟ್ರು ತಮ್ ವಿಸ್ಮಯವನ್ನು ವ್ಯಕ್ತಪಡಿಸಿದರು.

’ಮೇಷ್ಟ್ರೇ ನಿಮಗೊಂದ್ ವಿಷ್ಯಾ ಗೊತ್ತಾ...’ ಎಂದು ನಂಜ ಬಾಯ್ ತೆರೆಯುತ್ತಿದ್ದಂತೆಯೇ ಅವನು ಏನ್ ಹೇಳೊಕ್ ಹೊರಟಿದ್ದಾನೆ ಎಂದು ನನಗೆ ಆಗ್ಲೇ ಗೊತ್ತಾಗ್ ಹೋಯ್ತು, ಮೇಷ್ಟು ಮಾತ್ರ ಒಂದ್ ದೊಡ್ಡ ಸೊಳ್ಳೇ ಹೋಗೋ ಅಷ್ಟು ಬಾಯ್ ತೆರೆದುಕೊಂಡಿದ್ದು ನೋಡಿ ನನಗೂ ಆಶ್ಚರ್ಯವಾಯ್ತು, ನಂಜ ಇದ್ದೋನು ತನಗೇನೂ ಆಗೇ ಇಲ್ಲವೆನ್ನುವಂತೆ, ’ಮುಂದಿನ ವಾರ ಯಡ್ಡಿ ಸಾಹೇಬ್ರು ಧರ್ಮ ಧೀಕ್ಷೆ ತೊಗೋತಾರಂತೆ ಗೊತ್ತಾ!’ ಎನ್ನಲು, ಮೆಷ್ಟ್ರು ’ನೀನೊಂದು ಕೆಲ್ಸಿಲ್ಲ ಸುಮಿರು’ ಎಂದು ಅವಾಜ್ ಹಾಕಿ ಸುಮ್ಮನಾದರು.

’ಮತ್ತಿನ್ನೇನು ಈ ಪಾಠಿ ಭವಿಷ್ಯ ನುಡಿಯೋ ಗತ್ತು ಇನ್ಯಾರಿಗೆ ತಾನೇ ಬಂದೀತು?’ ಎಂದು ನಂಜ ಹೇಳಿದ್ದು ಎಲ್ಲರಿಗೂ ಕೇಳಿದ್ದು ಯಾರಿಗೂ ಕೇಳಿಸದಂತಾಗಿ ಹೋಯಿತು.

# posted by Satish : 7:23 pm  6 comments

Monday, May 14, 2007

ಕರ್ಲಾನ್ ಹಾಸ್ಗೆ ಮೇಲ್ ಮಲಗೋವಯ್ಯಾ ಹಳ್ಳೀ ತಿರುಗಿದನಂತೆ!

'ಓಹ್, ಸಾವ್‌ಕಾರ್ರು ಇವತ್ತು ಎದ್ದಂಗಿದೆ...' ಎಂದು ಇಷ್ಟೊತ್ತು ನನ್ನ ಪಕ್ಕ ಕೂತುಗೊಂಡು ಒಂದೂ ಮಾತನಾಡದ ಕೋಡೀ ಹಳ್ಳಿ ಮೇಷ್ಟ್ರು ಇದ್ದಕ್ಕಿದ್ದ ಹಾಗೆ ಹೀಗಂದಿದ್ದನ್ನು ನೋಡಿ ಯಾರನ್ನು ಕುರಿತು ಹೇಳಿದರೋ ಎಂದು ಎಷ್ಟು ತಲೆ ತುರಿಸಿಕೊಂಡರೂ ಗೊತ್ತಾಗದಿದ್ದರಿಂದ ಅವರನ್ನೇ ಕೇಳಿದೆ, 'ಏನ್ ಮೇಷ್ಟ್ರೇ ಸ್ವಲ್ಪ ಬಿಡಿಸಿ ಹೇಳ್ರಲ್ಲಾ' ಎನ್ನಲು,

'ಅದೇ ನಮ್ ಕುಸಾ ಬಗ್ಗೆ...', ಎಂದು ಉಸಿರನ್ನು ಸ್ವಲ್ಪ ಜೋರಾಗೇ ಎನ್ನುವಂತೆ ಒಳಗೆಳೆದುಕೊಂಡು, ಒಂದು ಕೈಯಲ್ಲಿ ಪೇಪರನ್ನು ಮಡೆಚುತ್ತಾ ಮತ್ತೊಂದು ಕೈಯನ್ನು ಮೀಸೆ ಮೇಲೆ ಆಡಿಸಿಕೊಂಡು 'ಈ ವಯ್ಯಾ ಕಳೆದ ಹದಿನೈದು ತಿಂಗಳಿನಿಂದ ಹಳ್ಳೀ-ಪಳ್ಳೀ ತಿರುಗ್ಯಾನಂತೆ ಜನರ ಕಷ್ಟಾನ ಅವರ ಮನೆ ಬಾಗಿಲ್ಗೇ ಹೋಗಿ ತಿಳುದುಕಂಡ್ಯಾನಂತೆ...ಅಂದ್ರೆ ಬ್ಯಾರೇ ಯಾರೂ ಮಾಡ್ದೇ ಇರೋ ಘನಕಾರ್ಯಾನಪ್ಪಾ, ಅದು!' ಎಂದು ಸುಮ್ಮನಾದರು.

ನನಗೆ ಸ್ವಲ್ಪ ಕಷ್ಟಕ್ಕೆ ಬಂತು, ಈಗ ಮೇಷ್ಟ್ರು ಕುಸಾ ನನ್ನು ಹೊಗಳುತ್ತಿದ್ದಾರೋ, ತೆಗಳುತ್ತಿದ್ದಾರೋ ಒಂದು ಕ್ಷಣ ಗೊತ್ತಾಗದೇ ಸ್ವಲ್ಪ ತಡವರಿಸಿದನಂತೆ ಮಾಡಿ, 'ಪರವಾಗಿಲ್ಲ ಮನ್ಷ್ಯಾ, ಬೇರೇ ಯಾರೂ ಮಾಡ್ದೇ ಇರೋ ಘನಕಾರ್ಯಾನೇ ತಾನೆ ಅದು, ಅದರಿಂದೇನಾಯ್ತು?' ಎಂದೆನೋ, ಮೇಷ್ಟ್ರು ಜ್ವಾಲಾಮುಖಿ ಸಿನಿಮಾದಲ್ಲಿನ ರಾಜ್‌ಕುಮಾರ್ ನಂತೆ ಮುಖಮಾಡಿಕೊಂಡು,

'ಸ್ವಲ್ಪ ಸುಮ್ನಿರ್ರೀ, ಈ ನನ್ ಮಕ್ಳು ಹಳ್ಳೀ-ಪಳ್ಳೀ ತಿರುಗಿಕ್ಯಂಡು ಅಲ್ಲೀಯೋರಿಗೆ ಕಷ್ಟ ತಂದೋರೇ ವಿನಾ, ಏನೂ ಉದ್ದಾರಾದಂಗಿಲ್ಲ ಇವರಿಂದ. ನಮ್ ನಿಜಲಿಂಗಪ್ಪ್ನೋರು ಮಾಡದೇ ಇರೋ ಘನಕಾರ್ಯಾನಾ ಅದು, ನಮ್ ಹೆಗಡೆಯೋರು ಮಾಡದೇ ಇರೋ ಸಿದ್ಧಾಂತಾನ ಅದು? ಈ ವಯ್ಯಾ ಹೋದಲ್ಲೆಲ್ಲಾ ಒಂದ್ ರೀತಿ ಬಿಳಿ ಆನೆ ಹೋದಂಗೆ ಹಿಂಬಾಲಕರು, ಸೇವೇ ಮಾಡೋರ್ ಸಂತೇನೇ ಹೋಗ್ತಿತ್ತಲ್ಲಾ ಅದ್ರ ಖರ್ಚೆಲ್ಲಾ ಯಾವನ್ ಕೊಡತಿದ್ದಾ? ಅಷ್ಟೂ ಮಾಡಿ ಅದೇನೋ ಬಾಳಾ ದೊಡ್ಡ ಘನಕಾರ್ಯ ಅಂದಂಗೆ ಇವತ್ತಿಗೆ ಉಳಿದವ್ರು ಮ್ಯಾಲೆ ತಾನ್ ಹಿಂಗ್ ಮಾಡ್ದೇ ಹಂಗ್ ಮಾಡ್ದೇ ಅಂತ ಕೊಚ್‌ಕೊಳ್ಳೋದ್ ಬ್ಯಾರೆ, ಥೂ' ಎಂದು ಯಾರದ್ದೋ ಮುಖದ ಮೇಲೆ ಉಗಿದಂಗೇ ಮಾಡಿದ್ರು.

ನಾನೆಂದೆ, 'ಅಲ್ಲಾ ಮೇಷ್ಟ್ರೇ, ಹದಿನೈದ್ ತಿಂಗ್ಳಿಂದಾ ಈವಯ್ಯಾ ನಿಜವಾಗಿ ಮಾಡಿರೋದಾದ್ರೂ ಏನೂ ಅಂತೀನಿ? ಬರೀ ಹದಿನೈದ್ ತಿಂಗ್ಳು, ವಾರ ಅಂತ ಎಣಿಸೋದನ್ನ ನೋಡಿದ್ರೆ ಹೋಗೋ ಕಾಲ ಬಂದಂಗ್ ಕಾಣಲ್ಲ ನಿಮಗೆ?'

ಮೇಷ್ಟ್ರು, 'ನಿಮಗ್ಗೊತ್ತಾಗಲ್ಲ ಬಿಡ್ರಿ, ಯಾವನ್ ನಂಬಿದ್ರೂ ಈ ಸಮ್ಮಿಶ್ರ ಸರಕಾರದವರನ್ನ್ ಮಾತ್ರ ನಂಬಬಾರ್ದು. ತಿಂಗಳು, ವಾರಗಟ್ಟಲೇ ನಡೆಯೋ ಪಕ್ಷ, ಅವರ ಕಾರುಬಾರ ಎಲ್ಲೀವರೆಗೆ ಬರ್ತತಿ ನೀವೇ ಹೇಳ್ರಿ? ಅಷ್ಟೂ ಮಾಡಿ, ತಾನ್ ಹೋದಲ್ಲೆಲ್ಲ ತನ್ನ ಪರಿಸರ ತಗೊಂಡ್ ಹೋಗೋ ಮನ್ಷ್ಯಾ, ಕರ್ಲಾನ್ ಹಾಸಿಗೆ ಮ್ಯಾಲೆ ಮಲಗಿಕೊಂಡೇ ಹಳ್ಳೀ ಹಳ್ಳೀ ತಿರುಗಿನಂತೆ ಎಂದು ನಮ್ಮ ಕರ್ನಾಟಕದ ಜನ ಬಾಳ್ ದಿನ ನೆನಪಿನ್ಯಾಗೆ ಇಟ್ಟುಕೊಳ್ಳಂಗೆ ಮಾಡಿದ್ದನ್ನುಉ ಬಿಟ್ರೆ ಇನ್ನೇನೂ ನನ್ನ ಕಣ್ಣಿಗೆ ಕಾಣಂಗಿಲ್ಲ, ನೋಡ್ರಿ' ಎಂದರು, ನಾನು ಸುಮ್ಮಿನ್ನಿದ್ದನ್ನು ಗಮನಿಸಿ, 'ಇನ್ನು ಇಂತೋರು ಇದ್ರೆಷ್ಟು, ಬಿಟ್ರೆಷ್ಟು?' ಎಂದು ದೊಡ್ಡ ಪ್ರಶ್ನೆಯನ್ನು ಎಸೆದು ನನ್ನ್ ಕಡೆ ನೋಡಿದ್ರು, ನಾನು ಮತ್ತೆಲ್ಲೋ ನೋಡಿಕೊಂಡು ಅವರಿಗೆ ಉತ್ತರಕೊಡುವ ಕಷ್ಟದಿಂದ ತಪ್ಪಿಸಿಕೊಂಡೆ.

ಮೇಷ್ಟ್ರು ಇನ್ನೂ ಒಂದ್ ಹೆಜ್ಜೆ ಮುಂದ್ ಹೋಗಿ, 'ಅಪ್ಪಾ ಹೋದಲ್ಲೆಲ್ಲಾ ಕುತಗಂಡೇ ಅಫಿಷಿಯಲ್ಲಾಗಿ ನಿದ್ದೀ ಮಾಡತಿದ್ದ, ಮಗ ಹಾಸಿಗೀ ಮ್ಯಾಗ ಅಡ್ಡಲಾಗಿ ಬಿದ್ದ್‌ಕೋತಾನೇ ಅನ್ನೋದ್ ಬಿಟ್ರೇ ಮತ್ತೇನೂ ಕಾಣಂಗಿಲ್ಲಪ್ಪಾ ನನ್ನ್ ಕಣ್ಣೀಗೆ' ಎಂದು ಪುನಃ ದೊಡ್ಡ ಮೌನದ ಮೊರೆಗೆ ಹೋದರು.

# posted by Satish : 8:23 pm  6 comments

This page is powered by Blogger. Isn't yours?

Links
Archives