Monday, July 23, 2007

ಶೆಖಾವತ್ತೇ ಪ್ರಥಮ ಪ್ರಜೆ...

ಮೇಷ್ಟ್ರು ಮುಖ ಇತ್ತ ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ಸೋತ ಭೈರೋನ್‌ಸಿಂಗ್ ಶೆಖಾವತ್ತ್‌ನ ಹಾಗಾಗಿತ್ತು, ಮೇಷ್ಟ್ರಿಗೆ ಆಘಾತವಾಗೋ ಇಂಥಾ ಸನ್ನಿವೇಶಗಳನ್ನ ನಂಜ ಒಳಗೊಳಗೇ ಅನುಭವಿಸಿಕೊಂಡು ಒಂದೇ ಕಣ್ಣಿನ ರೆಪ್ಪೆಯಡಿಯಲ್ಲಿ ನಗುತ್ತಿದ್ದರೆ ನಾನೂ, ತಿಮ್ಮಕ್ಕನೂ ನಮ್ಮ ಪಾಡಿಗೆ ನಾವು - ಯಾರು ದೇಶ ಆಳಿದರಂತೆ ಎಂದುಕೊಂಡು ಸುಮ್ಮನಿದ್ದೆವು.

ಮೇಷ್ಟ್ರು ಕನ್ನಡಪ್ರಭವನ್ನು ತಿರುವಿ ಹಾಕಿದ್ದೇ ಹಾಕಿದ್ದು, ಎಲ್ಲಿ ಯಾವ ಪುಟವನ್ನು ಓದಿದ್ರೂ ಅವರಿಗೆ ಶಾಂತಿ ಸಮಾಧಾನ ಎಂಬುದೇ ಇಲ್ಲ!

ಕೊನೆಗೂ ಉಸಿರನ್ನು ಹೊರಬಿಟ್ಟರು ಬಹಳ ಹೊತ್ತಿನ ನಂತರ ಶಿಳ್ಳೆ ಹೊಡೆಯಲು ಪ್ರಯತ್ನಿಸಿದ ಉಗಿಬಂಡಿಯಂತೆ ಅವರ ಉಸಿರಿನಲ್ಲಿ ಬಿಸಿ ಇರುವುದು ಎದ್ದು ಕಾಣುತ್ತಿತ್ತು, 'ಆ ವಮ್ಮಾ ಅಧಿಕಾರಕ್ಕ್ ಬಂದ್ಲು, ಈ ಭಂಡ್ ನನ್ ಮಕ್ಳು ಅಕಿ ಸೆರಗ ಹಿಡಿಯಕ್ ಹೊಂಟವರೆ...'

ನಮಿಗ್ಯಾಕೆ ದೊಡ್ಡೋರ್ ವಿಷ್ಯಾ ಎಂದು ಯಾವುದೋ ಕರಾರು ಪತ್ರಕ್ಕೆ ಸಹಿ ಹಾಕಿಕೊಟ್ಟವರಂತೆ ನಂಜನೂ, ತಿಮ್ಮಕ್ಕನೂ ಏನನ್ನು ಹೇಳಲು ಹೊರಡಲಿಲ್ಲ, ನಾನು ಮುಖವನ್ನು ಎತ್ತಿ ಮೇಲೆ ಹಿಡಿದೆ - ಮೊದಲು ಬರುವ ಮಳೆಯ ಹನಿಗಳನ್ನು ಬಿಸಿಲಿಗೆ ಬಸವಳಿದ ಹುಡುಗ ಕಾದು ನೋಡುವ ಹಾಗೆ...

'ನಮ್ಮ್ ದೇಶಾ ಏನೂ ಎತ್ತಾ ಅಂತ ಪ್ರಜ್ಞೆ ಇಲ್ಲದ್ ಜನ...ನಾಳೆ ಅಮೇರಿಕಾ ಇಂಗ್ಲೆಂಡಿಗೆ ಈ ವಮ್ಮಾ ಸೀರೆ ಸುತ್ತಿಕ್ಯಂಡು ಹೋಗ್ಲಿ ತಲೀ ಮ್ಯಾಲಾ, ಎಲ್ಲರೂ ನಗತಾರೆ...'

ಹ್ಞೂ, ನನಗೆ ಈಗ ಪೀಕಲಾಟಕ್ಕಿಟ್ಟುಕೊಂಡಿತು...ಹಲವಾರು ಆದರ್ಶಗಳನ್ನು ನಂಬಿಕೊಂಡಿರುವ ನಮ್ ಕೋಡೀ ಹಳ್ಳೀ ಮೇಷ್ಟ್ರು ಬಾಯಿಂದ ಬರುವ ಮಾತುಗಳೇ ಅವು? ಅವರ ಅಂತರಾಳಕ್ಕೆ ಇಳಿದವರಿಗೆ ಗೊತ್ತು...ಅವರ ಅಸಮಧಾನವಿರೋದು ಕಾಂಗ್ರೇಸ್ಸಿನ ಮೇಲೇ ಎಂದು..., ನನಗಿನ್ನು ಸುಮ್ಮನಿರಲಾಗಲಿಲ್ಲ,

'ಅಲ್ಲಾ ಮೇಷ್ಟ್ರೇ, ಏನಾರ ಹಾಳು ಬಡಿಸಿಕ್ಯಂಡ್ ಹೋಗ್ಲಿ, ಆ ವಮ್ಮಾ ಸೀರೆ ತೊಟ್ಟರೆಷ್ಟು, ಬಿಟ್ಟರೆಷ್ಟು!' ಎಂದು ಪರಿಸ್ಥಿತಿಯನ್ನು ತಿಳಿ ಮಾಡಲು ನೋಡಿದೆ, ತಿಮ್ಮಕ್ಕ, ನಂಜ ಸ್ವಲ್ಪ ನಕ್ಕಂತೆ ಮುಖ ಮಾಡಿದರು.

'ಹಂಗಲ್ರೀ, ಇದು ದೊಡ್ಡ ಪ್ರಿನ್ಸಿಪಲ್ ವಿಷ್ಯಾ...ಇನ್ನ್ ಮ್ಯಾಲೆ ರಾಷ್ಟ್ರಪತಿ ಅಂತ ನಾವ್ ಯಾರನ್ನ್ ಕರಿಯಣ...ಹೆಂಗುಸ್ರುನ್ ಕಟ್‌ಕೊಂಡ ತಂಡದವ್ರು ರಾಷ್ಟ್ರಪತ್ನಿ ಅನ್ನೋ ಪದವನ್ನು ಹುಟ್ಟು ಹಾಕದೇ ಇದ್ರೆ ಸಾಕು!'

ನಾವೆಲ್ಲಾ ಸುಮ್ನೇ ಇರೋದನ್ನ ನೋಡಿ...

'ಒಬ್ಬ ನಾಯಕನಾಗೋದಕ್ಕೂ ಲಾಯಕ್ಕಿರಬೇಕು...ನಾಕೂವರೆ ಅಡಿ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲಾ ಅಲ್ಲ ಇದೂ, ಗ್ಲೋಬಲ್ ಎಕಾನಮಿ ಕಾಲ...ನಮ್ ದೇಶದ ನಾಯಕ್ರೂ ಅಂದ್ರೆ ಝೂ ನಲ್ಲಿರೋ ಪ್ರಾಣಿಗಳನ್ನ್ ನೋಡ್ದಂಗ್ ಆಡ್ತಾರ್ ಜನ'.

ಈಗ ನಂಜನ ವರಸೆ, 'ಮೇಷ್ಟ್ರೇ, ಹೋಗ್ಲಿ ಬಿಡ್ರಿ, ಬ್ಯಾರೆ ಯಾವ್ದೋ ದೇಶ್ದೋರಿಗೆ ಅಂತ ನಾವು ನಮ್ ತನ ಬಿಡಾಕಾಯ್ತದೇ?'

ತಿಮ್ಮಕ್ಕ ಇದ್ದೋಳು, 'ನಿಮಿಗೆಲ್ಲಾ ಒಂದ್ ವಿಷ್ಯಾ ಇನ್ನೂ ಗೊತ್ತಾದಂಗಿಲ್ಲಾ, ಆ ಭೈರೋನ್ ಸಿಂಗ್ ಬಿದ್ದೋದ್ರೂವೇ, ನಮ್ ರಾಷ್ಟ್ರಪತೀ ಶೆಕಾವತ್ತೇ, ಗೊತ್ತಾ?'

ನಾನು, 'ತಿಮ್ಮಕ್ಕಾ ಶೆಕಾವತ್ತ್ ಸೋತವನೇ, ಈಗ ಈ ಪ್ರತಿಭಾ ಪಾಟೀಲ್ ಗೆದ್ದಿರೋದು...'

ತಿಮ್ಮಕ್ಕಾ ನಮ್ಮ್ ಜೊತೇ ಸೇರಿದ್ ಮ್ಯಾಲೆ ತನ್ನ್ ಸೋಲನ್ನೆಲ್ಲಿ ಒಪ್ಕೋತಾಳೇ, 'ಗೊತ್ತೂ, ನಂಗೂ ಗೊತ್ತು, ಆ ವಮ್ಮಾ ಪ್ರತಿಭಾ ಗಂಡನ್ನ್ ಹೆಸ್ರೂ ಏನ್ ಹೇಳೂ? ನಮ್ ರಾಷ್ಟ್ರದ ಪ್ರಥಮ ಪ್ರಜೆಯ ಗಂಡ ಶೆಕಾವತ್ತ್, ಆದ್ರಿಂದ ಶೇಖಾವತ್ತೇ ನಿಜವಾದ ರಾಷ್ಟ್ರಪತಿ!' ಎನ್ನಲು ದಿಗ್ಬ್ರಮೆಗೊಂಡ ನಂಜನನ್ನು ನಾವೆಲ್ಲಾ ಸಮಾಧಾನ ಮಾಡಿದೆವು.

Labels:


# posted by Satish : 12:18 pm  6 comments

Friday, July 13, 2007

ಅದೇನ್ ಅವ್ರಪ್ಪನ್ ಮನೇ ಮರಳು...

'ತೆಗಿ ಇವ್ನಾ, ಈ ಅನ್ಸಾರಿ ಸುಮ್ಕಿರ್‍ಬಾರ್ದಾ? ಯಡಿಯೂರಪ್ಪಾ ಮುಖ್ಯಮಂತ್ರಿ ಆಗಲ್ಲ ಅಂತ ಎಲ್ಲವನಿಗೂ ಗೊತ್ತಿದೆ, ಅದನ್ನ ಜಗಜ್ಜಾಹೀರ್ ಮಾಡೋದೇನೈತಿ?' ಎಂದು ನಂಜ ತಲೆಕೆರೆದುಕೊಳ್ಳುತಿದ್ದುದನ್ನು ನೋಡಿ ಮೇಷ್ಟ್ರು ತಡೀಲಾರ್ದೆ ಉತ್ತರ ಕೊಡ್ಲೋ ಬ್ಯಾಡೋ ಎಂದು ಯೋಚಿಸಿಕೊಳ್ಳುತ್ತಿದ್ದಂತೆ ತೋರುತ್ತಿತ್ತು. ಆವಾಗವಾಗ ಕನ್ನಡಕವನ್ನು ಮೂಗಿನ ಮೇಲೇರಿಸಿಕೊಂಡು ನಂಜನಿಗೆ ಒಂದು ಲುಕ್ ಕೊಡುತ್ತಿದ್ದುದನ್ನು ಬಿಟ್ರೆ ಅವರಿನ್ನೇನು ಹೇಳದಿದ್ದುದನ್ನು ನೋಡಿ ನನಗೆ ಆಶ್ಚರ್ಯವಾದರೂ, ಕುರಿ ಕೊಬ್ಬಿದಷ್ಟೂ ಕುರುಬನಿಗೇ ಆದಾಯವೆಂದು ಕಾಯುತ್ತಿದ್ದಂತೆ ಕಂಡುಬಂತು.

ನಂಜನಿಗೂ ಗೊತ್ತು ಯಾವ ಬಟನ್ ಒತ್ತಿದ್ರೆ ಮೇಷ್ಟ್ರು ದರ್ಪದಿಂದ ಹೊರಗೆ ಬಂದು ಒಂದೆರಡು ಮಾತುಗಳನ್ನಾದರೂ ಉದುರಿಸ್ತಾರೆ ಅನ್ನೋ ಹೂಟಿ. ನಾನೂ ತಿಮ್ಮಕ್ಕನೂ ನಮ್ಮ ಪಾಡಿಗೆ ನಾವಿದ್ವಾ, ನಂಜ ಮತ್ತೆ ತನ್ನ ಎಲುಬಿಲ್ಲದ ನಾಲಿಗೆಯನ್ನ ಮತ್ತೆ ಹರಿಬಿಟ್ಟ,

'ಎಲ್ಲಾ ಫಾರಂ ಹೌಸ್ ತುಂಬಿಕ್ಯಂಡ್ ಕುತಗಂತಾರೆ ಕಳ್‌ನನ್ ಮಕ್ಳು, ಅದೇನೋ ಕೋಳೀ ಸಾಕ್ತಾರೋ ಅಲ್ಲಿ, ಇಲ್ಲಾ ಕಾವ್ ಕೊಡ್ತಾರೋ...'.

ಈ ಸಾರಿ ತಿಮ್ಮಕ್ಕನ ಪ್ರವೇಶ, ಅದೂ ದಿಢೀರನೆ...ಏನನ್ನೋ ಹೇಳಲು ಹೋದ ಮೇಷ್ಟ್ರು ಒಂದ್ನಿಮಿಷ ಕಾಯುವಂತೆ ಬೇರೆ ಮಾಡಿತ್ತು,

'ಅಲ್ಲಲ್ಲೇ, ಫಾರಂ ಹೌಸ್ ಹೊಕ್ಕಂಡು ಯಾವನಾರಾ ಕೊಳೀ ಸಾಕ್ತಾನಾ? ಇದ್ದ ಕೋಳೀನಾ ಉಪ್ಪೂ-ಕಾರಾ ಹಾಕಿ ಮುಗುಸ್ತಾರ್ ತಿಳಕಾ...ನೀನು ಇದ್ದೀ ನೋಡು, ಎತ್ಲಾಗರ ಹೋಗಿ ಪುಡಾರ್ಕೆ ಮಾಡಕ್ ಯೋಗ್ಯನಿದ್ದೀ ಅಷ್ಟೇ' ಎಂದು ದೂರದಿಂದ ಮುಖಕ್ಕೆ ಮಂಗ್ಳಾರ್ತಿ ಮಾಡಿದಳು.

ನಂಜ ತನ್ನ ಮಾತನ್ನು ಸಾಧಿಸಿಕೊಳ್ಳುವವನ ಹಾಗೆ, 'ಅಲ್ಲಬೇ, ಕುದುರೀ ಲೆಕ್ಕಾ, ಕುರಿ ಲೆಕ್ಕದ್ ಬಗ್ಗೇ ಕೇಳಿಲ್ಲಾ ನೀನು? ೪೫ ಜನ ಬಿಜೆಪಿ ಶಾಸಕ್ರೂ ಅಂದ್ರೆ ಅದೊರಳಗ ಹೆಚ್ಚು ಮಂದಿ ಕುರಿ-ಕೋಳಿ ತಿನ್ನೋ ಪೈಕಿ ಅಲ್ಲಾ ಅಂತ ಗೊತ್ತಿಲ್ಲನು? ನಿನಗೇನ್ ಗೊತ್ತಾಕತಿ ಬಿಡು.'

ಮೇಷ್ಟ್ರು ಇಷ್ಟೊತ್ತು ಸುಮ್ಮನಿದ್ದವರು ಸ್ಪೋಟಿಸತೊಡಗಿದರು, ನವರಸ ನಾಯಕ ಜಗ್ಗೇಶ್ ಸಿಟ್ಟು ಬಂದಾಗ ಕಷ್ಟ ಪಟ್ಟು ಕೊಡೋ ಪೋಸನ್ನು ಕಾಪಿ ಹೊಡೆಯೋ ಹಾಗೆ ಒಂದು ಆಂಗಲ್ಲಿನಿಂದ ಕಂಡು ಬಂದ ಅವರು, 'ಲೇ ನಂಜಾ, ಯಡ್ಡೀ ಸಾಹೇಬ್ರೂ ಮುಖ್ಯಮಂತ್ರಿ ಆಗ್ತಾರೇ ಬಾಜಿ ಕಟ್ಟು, ಅದೇನ್ ಕಟ್ತೀಯೋ ನಾನೂ ನೋಡೇ ಬಿಡ್ತೀನಿ!' ಎಂದು ಓಪನ್ ಸವಾಲ್ ಹಾಕಿದರೋ ನಂಜ ಏನಾದ್ರೂ ಹೇಳ್ಲೇ ಬೇಕು ಎಂದು ನನ್ನ ಕಡೆ ತಿರುಗಿ ನೋಡಿದ, ನಾನು ಕಣ್ಣು ಮಿಟುಕಿಸಿದೆ, ನಂಜನಿಗೆ ಈಗ ನನ್ನ ಸಪ್ಪೋರ್ಟ್ ಸಿಕ್ಕಿತೆಂಬ ಹುರುಪಿನಲ್ಲಿ,

'ಮೇಷ್ಟ್ರೆ, ಬ್ಯಾಡಾ ಮತ್ತೆ, ಸುಮ್ನೇ ಬೆಟ್ ಕಟ್ ಮತ್ತೆ ನನ್ನೇ ಬೈ ಬೇಡಿ ನೀವ್ ಸೋತ್ ಮ್ಯಾಗೆ...ಎಡ್ಡಿ ಉಪ ಮುಖ್ಯಮಂತ್ರೀ ಸ್ಥಾನ ಬಿಟ್ಟು ಎತ್ಲಾಗೂ ಹೋಗಲ್ಲ ಅಂತ ನಂದೊಂದು ಐನೂರ್ ಬರಕೊಳ್ಳೋಣ್ಣೋ...' ಎಂದು ನನ್ನ ಕಡೆ ಸನ್ನೆ ಮಾಡಿದ.

ನಾನಿದ್ದೋನು, 'ಲೇ, ನನ್ನನ್ನೇನು ಚಿತ್ರಗುಪ್ತಾ ಅಂತ ತಿಳಕಂಡಿಯೇನೋ ನಿನ್ನ ಲೆಕ್ತಾ ಎಲ್ಲಾ ಬರಕೊಳ್ಳೋಕೆ, ಯಾರು ಗೆದ್ರೂ ನನಗರ್ಧ ಕೊಡ್ತೀರಿ ಅನ್ನೋದಾದ್ರೆ, ನಾನು ಎಲ್ಲಾ ಲೆಕ್ಕಾನೂ ಬರಕಳಕ್ ರೆಡಿ ಇದೇನ್ ನೋಡ್ರಿ...' ಎಂದು ನಕ್ಕೆ.

ಮೇಷ್ಟ್ರಿಗೆ ಯಾರ ಮಾತಿನಿಂದ ಎಷ್ಟೊತ್ತಿಗೆ ಸಿಟ್ಟ್ ಬರುತ್ತೋ ಯಾರಿಗ್ ಗೊತ್ತು...ಶುರು ಹಚ್ಚಿಕೊಂಡರು...ಎದೆ ವೇಗವಾಗಿ ಉಸಿರಾಡಿಕೊಳ್ಳುತ್ತಿತ್ತು...'ಕೊಡ್ತಾರ್ ಕೊಡ್ತಾರ್...ಅದೇನ್ ಅವ್ರಪ್ಪನ್ ಮನೇ ಮರಳು, ಮಾಯಸಂದ್ರದ ಹತ್ರ ಗೋಚಿಕೊಂಡು ಎಲ್ಲವನೂ ಕಾಸು ಮಾಡಿಕೊಂತಾನಲ್ಲ ಹಂಗೆ! ಹಿಂದೆ ಗಣಿಗಾರಿಕೆಯಾಯ್ತು, ಈಗ ಮರಳುಗಾರಿಕೆ ಶುರು ಹಚ್ಚಿಕೊಂಡೋರೆ...ಇನ್ನೊಂದ್ ಸಲ ಯಾವನ್ನಾದ್ರೂ ಬೆಟ್ ಕಟ್ಟೋ ಮಾತಾಡ್ರಿ ಮಾಡ್ತೀನ್ ನಿಮಗೆ...' ಎಂದು ಎಲ್ಲರನ್ನೂ ಶನಿ ವಕ್ರ ದೃಷ್ಟಿಯಲ್ಲಿ ನೋಡೋ ಹಾಗೆ ನೋಡಿ ಮರೆಯಾದರು.

ನಾನೂ, ನಂಜ, ತಿಮ್ಮಕ್ಕ - ಈ ಮೇಷ್ಟ್ರಿಗ್ ಏನಾಯ್ತು ಎಂದು ಹೇಳಿಕೊಳ್ಳುವಂತೆ ಮುಖ-ಮುಖ ನೋಡಿಕೊಂಡೆವು.

# posted by Satish : 2:43 pm  0 comments

Thursday, July 05, 2007

ಕಾಂಗ್ರೇಸ್‌ನವ್ರಿಗೆ ಕಾಮಾಲೆ ರೋಗ ಬಂದದೆ...

’ಎಲ್ಲಾ ಕೈ-ಕೈ ಜೋಡಿಸಿಕೊಂಡ ಮುಂಡೇಗಂಡರು ಈಗ ಒಬ್ಬೊಬ್ಬರಾಗೇ ರಾಗ ತೆಕ್ಕಂತ ಕುಂತವರೆ...’ ಎಂದು ನಂಜನ ಬಾಯಲ್ಲಿ ಬೆಳ್ಳಂಬೆಳಗ್ಗೆ ಯಾವಾಗ ಈ ರೀತಿಯ ಸ್ವರಗಳು ಹೊರಡಲು ಶುರುಮಾಡಿಕೊಂಡವೋ ಆಗ ಏನೋ ಆಗಬಾರದ್ದು ಆಗಿ ಹೋಗಿದೆ ಎಂದುಕೊಂಡು ಅವನ ಹೆಗಲಿನ ಮೇಲಿನಿಂದ ಅವನು ಓದುತ್ತಿದ್ದ ಸುದ್ದಿಯ ಪುಟವನ್ನು ನೋಡಿದರೆ ಕಾಂಗ್ರೇಸ್‌ನವ್ರಿಗೆ ಕಾಮಾಲೆ ರೋಗ ಬಂದದೆ...ಎಂದು ಯಡ್ಡಿ ಸಾಹೇಬ್ರು ಕೊಟ್ಟ ಹೇಳಿಕೇನಾ ಎರಡೆರಡು ಸಾರಿ ಓದುತ್ತಿದ್ದುದು ಕಂಡು ಬಂತು.

’ಏನಾಯ್ತೋ ಈಗ...’ ಎಂದ ನನ್ನ ಮಾತನ್ನೂ ಕೇಳದೇ, ಅವನ ತಲೆಯಲ್ಲಿರೋ ವಿಚಾರಗಳೆಲ್ಲ ನನಗೆ ಗೊತ್ತು ಅನ್ನೋ ನಂಬಿಕೆಯಿಂದ, ’ಮತ್ತೇನ್ರಿ, ಕಾಮಾಲೆ ಬಂದೋರಿಗೆ ಕಣ್ಣಾ ಟೆಸ್ಟ್ ಮಾಡ್ತಾರಾ? ಹಂಗಂದೋರ್ ತಲೆ ಮೊದ್ಲು ಟೆಸ್ಟ್ ಮಾಡಿಸ್‌ಬೇಕು...’ ಎಂದು ಪೇಪರನ್ನು ಯಡ್ಡಿ ತಲೆಯ ಮೇಲೆಯೇ ಕುಕ್ಕುತ್ತಿದ್ದೇನೇನೋ ಎನ್ನೋ ಭ್ರಮೆಯಲ್ಲಿ ಜಗಲಿಯ ಕಟ್ಟೆಗೆ ಕುಕ್ಕಿದ.

’ಏನಿವತ್ತು ಮೇಷ್ಟ್ರು ಇಲ್ಲಾ ಅಂತ ಬಾಯಿಗೆ ಬಂದಂಗ್ ಮಾತಾಡಕ್ ಹತ್ತೀಯಲ್ಲ...’ ಎಂದು ಒಳಗಿಂದಲೇ ತಿಮ್ಮಕ್ಕ ನಂಜನಿಗೆ ಅತಿಯಾಗಿ ಮಾತನಾಡುತ್ತಿದ್ದುದಕೆ ತಿವಿದಳು.

’ಸುಮ್ಕಿರಬೇ, ಈ ಐವತ್ತು ವರ್ಷದಿಂದ ಕಾಂಗ್ರೇಸ್‌ನೋರು ಮಾಡ್ದಿರದ ಈ ವಯ್ಯಾ ಏನ್ ಕಿಸದವ್ನೇ..., ಜೀವ್‌ಮಾನಾನೆಲ್ಲ ತೆಯ್ದರೂ ಈ ಎಪ್ಪಗೆ ಇನ್ನೂ ಡೆಪ್ಯೂಟೀ ಆಗಿ ನೆಟ್ಟಗೆ ನಿಂದ್ರಕ್ ಬರಂಗಿಲ್ಲ, ಮತ್ತ್ ಅವ್ರಿವ್ರ ಕಡಿ ಬ್ಯೆಟ್ ಮಾಡಿ ತೋರುಸ್ತಾರೇಕೆ?’

ತಿಮ್ಮಕ್ಕ ಇವನ ಮಾತ್‌ಕೇಳಿ ಸುಮ್ಕಿರಲಾರ್ದೇ ಹೊರಗೇ ಬಂದಳು, ಒಳಗೆ ಗುಡಿಸುತ್ತಿದ್ದಳೋ ಏನೋ, ಕೈಲಿನ ಪೊರಕೆಯನ್ನೂ ಜೊತೆಯಲ್ಲೇ ತಂದಿದ್ದನ್ನು ನೋಡಿ ನಂಜನ ಮುಖ ಹುಳ್ಳಗೆ ಆಗಿದ್ದೂ ಅಲ್ದೇ ತಿಮ್ಮಕ್ಕನನ್ನೂ ಅವಳ ಕೈನ ಪೊರಕೆಯನ್ನೂ ಎರಡೆರಡು ಬಾರಿ ನೋಡಿ ಕನ್‌ಫರ್ಮ್ ಮಾಡಿಕೊಂಡನು...ತಿಮ್ಮಕ್ಕ,

’ಅಲ್ಲಾ ತಮ್ಮಾ, ಈ ಗ್ರಾಮ ವಾಸ್ತವ್ಯಾನೇ ತಗಾ, ನಮ್ ಕುಸಾ ಸರ್ಕಾರ್‌ದೋರ್ ತಾನೇ ಮಾಡಿದ್ದು, ಇನ್ಯಾವನಾರ ಮಾಡಿದ್ನಾ? ಹೆಂಗರ ಮನಿಕ್ಕ್ಯಳ್ಳಿ, ಅತ್ಲಗ ಹಳ್ಳೀ ಕಡಿ ಮುಖ ಹಾಕಿ ಮಲಕ್ಕ್ಯಳದ ರಾಜ್‌ಕಾರ್ಣಿಗಳು ಈಗೀಗ ಹಳ್ಳೀ ಕಡಿ ತಿರುಗಿ ನೋಡಾಕ್ ಹತ್ಯಾರಲೇ ತಿಳಕಾ...’

ನಂಜನಿಗೆ ಉರಿಹತ್ತಿತೆಂದು ಕಾಣುತ್ತೆ, ತಿಮ್ಮಕ್ಕನ ಮಾತನ್ನು ಮಧ್ಯದಲ್ಲೇ ತಡೆದು, ’ಸುಮ್ಕಿರು ಅಂತ ಅನ್ಲಿಲ್ಲಾ ನಿನಗ ಒಂದ್ ಸಾರಿ, ಅವ್ರ ಹಕ್ಕೀಕತ್ತಲ್ಲ ನಿನಗ ಗೊತ್ತಾಗಂಗಿಲ್ಲ ಬಿಡು, ಇವ್ರು ಹೋದಲ್ಲಿ ಹುಲ್ಲೂ ಬೆಳಯಂಗಿಲ್ಲಾ, ಇನ್ನ್ ಹಳ್ಳೀ ಉದ್ದಾರಾಗೋ ಮಾತ್ ಹಂಗಿರಲಿ.’ ಎಂದು ಬಿಡಬೇಕೇ, ತಿಮ್ಮಕ್ಕ ತನ್ನ ಪಟ್ಟನ್ನೆಲ್ಲಿ ಬಿಟ್ಟಾಳು,

’ಈ ಪ್ರಪಂಚಾನೇ ಹಿಂಗ ಮಗಾ...ತಾವೂ ಮಾಡಂಗಿಲ್ಲ, ಮಾಡೋ ಮಂದಿಗೂ ಬಿಡಂಗಿಲ್ಲ...’ ಎಂದು ಸುಮ್ಮನಾದಳು.

ನಂಜ, ’ಇಲ್ಲಿ ಬಂದ್ ನೋಡು, ನೀನೇ ಕಣ್ಣಾರೆ ನೋಡಿ ತಿಳಕಾ...ಅಧಿಕಾರದ ಬಗ್ಗೆ ನಾವು ತಲೆಕೆಡಿಸಿಕೊಳ್ಳೋದಿಲ್ಲ ಅಂದವರಲ್ಲ ನಿಜವಾದ ಮಾತಾ ಅದು, ಮಾತ್ ಆಡಿದ್ರೆ ಅಪ್ಪಗುಟ್ಟಿದ ಮಾತಾಡ್‌ಬೇಕು, ಇಲ್ಲಾ ಅಂತಂದ್ರೆ ಅದನ್ನ್ ತಗಂಡ್ ಏನ್ ಮಾಡಾಕ್ ಬರ್ತತಿ?’

ತಿಮ್ಮಕ್ಕ, ’ಓ, ಸುಮ್ಕಿರ್ಲೇ, ನಿಮ್ ಗುರುಗಳ್ನೂ ಕಂಡೀನಿ, ಮೇಷ್ಟ್ರು ಬರ್ಲಿ ಸುಮ್ಕಿರು, ನಿನಗೊಂದು ಗತಿ ಕಾಣಿಸ್ಲಿಲ್ಲಾ ನೋಡ್ಕ್ಯಾ...’

ಇವರ ವಾದವಿವಾದಗಳು ಆಗ ತಾನೇ ಎದ್ದು ಶಾಂತವಾದ ಸುಂಟರಗಾಳಿಯಂತಾಗಲು ನಾನು ವಿತ್ತಪ್ರಭದ ಪುಟವನ್ನು ಬದಿಗೆಳದು ಪೇಟೆ-ಧಾರಣೆ ಬಗ್ಗೆ ಓದತೊಡಗಿದೆ.

# posted by Satish : 5:33 am  0 comments

This page is powered by Blogger. Isn't yours?

Links
Archives