Tuesday, June 17, 2008

ಎಲ್ಲದಕು ಕಾರಣನು ಈ ಯಡಿಯೂರಪ್ಪ!

’ಪದ್ಮಪ್ರಿಯ ಅಮ್ಮೋರು ಸಿಕ್ಕೋರಂತೆ!’ ಎಂದು ತಿಮ್ಮಕ್ಕ ಜಗುಲಿ ಗುಡಿಸುತ್ತ ಆಶ್ಚರ್ಯ ತೋರಿಸಿದ್ದನ್ನು ನಾನು ಅದೊಂದು ಪ್ರಶ್ನೆಯೋ ಅಥವಾ ವಿಶ್ಲೇಷಣೆಯೋ ಎಂದು ಆಲೋಚಿಸುತ್ತಾ ಏನು ಉತ್ತರ ಹೇಳಲಿ ಎಂದು ಗೊಂದಲದಲ್ಲಿದ್ದಾಗ ನನ್ನ ಸಹಾಯಕ್ಕೆ ಬಂದವನು ನಂಜ.

’ತಾಯೀ, ಕೆಲ್ಸಾ ನೋಡು. ಆವಮ್ಮಾ ಯಾರ್ನೋ ಕೂಡಿಕ್ಯಂಡ್ ಗುಳೇ ಬಿದ್ದು ಹೋಗ್ಯಾಳೆ, ಅವಳು ಸಿಕ್ರೆಷ್ಟು ಬಿಟ್ರೆಷ್ಟು!’ ಎಂದು ನಂಜ ಹಂಗಿಸಿದ್ದನ್ನು ಕೇಳಿ ತನ್ನ ಕೈಲಿದ್ದ ಪೊರಕೆಯನ್ನು ಅಲ್ಲೇ ಬಿಸಾಡಿ ಸೆರಗಿನ ತುದಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಜಗಳಕ್ಕೆ ಬಂದವಳಂತೆ ಕೈ ಬಾಯಿ ಮುಂದೆ ಮಾಡಿಕೊಂಡು ಬಂದ ತಿಮ್ಮಕ್ಕ,

’ಲೇ, ಯಾವನಿಗ್ ಹೇಳ್ತಿ...ಈ ವಯ್ಯಾ ಅದ್ಯಾರ್ನೋ ಇಟ್‌ಕಂಡಿದ್ನಲಾ ಅದು ತಪ್ಪಲ್ವಾ, ಈ ಹಾಳ್ ಸಮಾಜಕ್ಕೆ ಬರೀ ಹೆಂಗುಸ್ರುದ್ದೇ ಕಾಣ್ಸುತ್ತೇ’ ಎಂದು ಹೇಳುತ್ತಾ ಕೈ ನಟಿಕೆ ಮುರಿದಳು. ತಿಮ್ಮಕ್ಕನ ಆರ್ಭಟವನು ನೋಡಿದ ನಂಜ, ಇದೇನ್ ಇವ್ಳು ಇದ್ದಕ್ಕಿದ್ದಂಗೇ ರಾಂಗ್ ಆಗವಳೇ, ಒಳ್ಳೇ ಪದ್ಮಪ್ರಿಯನ ಅವ್ವ ಆಡಿದಂಗೆ ಆಡ್ತವಳಲ್ಲಾ ಎಂದು ಮೂಗಿನ ಮೇಲೆ ಬೆಟ್ಟಿಡುತ್ತಾ ನನ್ನ ಕಡೆ ನೋಡಿದ, ನಾನು

’ನಂಜಾ, ಸುಮ್ನಿರು, ನಿನಗೊತ್ತಿರದ ವಿಷ್ಯಕ್ಯಾಕೆ ಕೈ ಹಾಕ್ತಿ?’ ಎಂದು ಇಬ್ಬರನ್ನೂ ಸಂತೈಸುವ ಹಾಗೆ ನೋಡಿದೆ, ಅದೇ ಟೈಮಿಗೆ ಕೋಡೀಹಳ್ಳಿ ಮೇಷ್ಟ್ರು ದರ್ಶನವಾಯ್ತು. ಒಂದು ಆಂಗಲ್ಲಿನಿಂದ ನೋಡಿದ್ರೆ ಸೂಟುಧಾರಿಗಳ ನಡುವೆ ಬಿಳಿಪಂಚೆ-ಅಂಗಿ ತೊಟ್ಟ ಸೆಂಟ್ರಲ್ ಮಿನಿಷ್ಟ್ರು ಚಿದಂಬರಂ ಕಂಡಂಗೆ ಕಾಣ್ತ ಇದ್ರು.

ನಂಜ ತಿಮ್ಮಕ್ಕನಿಂದ ದೃಷ್ಟಿ ಸರಿಸಿ ಮೇಷ್ಟ್ರನ್ನು ಕುರಿತು, ’ಏನ್ಸಾರ್‍, ಒಳ್ಳೇ ಯಡಿಯೂರಪ್ಪನ ಗತ್ತ್ ಬಂದಂಗೆ ಕಾಣ್ತತಿ ನಿಮ್ಮ್ ಮುಖದ ಮ್ಯಾಲೆ, ಏನ್ ಸಮಾಚಾರ? ಎಲ್ಲೋ ಮದುವಿ-ಪದುವಿಗೆ ಹೊಂಟ್ ನಿಂತಂಗ್ ಕಾಣ್ತತಲ್ಲ!’ ಎಂದು ಛೇಡಿಸಿದ.

ಮೇಷ್ಟ್ರು, ’ಏನಿಲ್ಲ ಕಣ್ಲೇ, ಸುಮ್ಕೇ. ಅದಿರ್ಲಿ ನಾನು ನಾನಿದ್ದಂಗೆ ಕಂಡ್ರೆ ಸಾಕು, ಯಾರ್ ಬಾಳ್ವೇನಾದ್ರೂ ಬೇಕು ಆ ಯಡಿಯೂರಪ್ಪನ್ನ ಬಾಳ್ವೆ ಯಾವನಿಗೂ ಬ್ಯಾಡಪ್ಪಾ!’ ಎಂದು ನಿಟ್ಟುಸಿರುಬಿಟ್ಟರು.

’ಅದ್ಯಾಕ್ ಸಾರ್, ಇಷ್ಟು ದಿನಾ ಅವ್ನೇ ಮುಖ್ಯಮಂತ್ರಿ ಆಗ್ಲಿ ಅಂತ ವಾದಾ ಮಾಡ್ತಿದ್ರಿ, ಇವತ್ತು ಅಂತಾದೇನಾತೂ?’ ಎಂದು ನಂಜ ತನ್ನ ಮುಳ್ಳನ್ನು ಬಲವಾಗಿ ತಳ್ಳಲು ನೋಡಿದ,

’ವಿರೋಧ ಪಕ್ಷದವರು ಅಂದ್ರೆ ನಾಮರ್ದ್‌ರಾಗಿ ಹೋಗವ್ರೆ, ಮಾತ್ ಎತ್ತಿದ್ರೆ...ಎಲ್ಲದಕೂ ಈ ಯಡಿಯೂರಪ್ಪನೇ ಕಾರ್ಣಾ ಅಂತ ಕೈ ಬೊಟ್ಟು ಮಾಡಿ ತೋರಿಸ್ತವ್ರೆ, ಇತ್ಲಾಗೆ ಯಾವನರ ಸಾಯ್ಲಿ, ಅತ್ಲಾಗೆ ಯಾವಂದಾರ ಹೆಂಡ್ತಿ ಮನೆ ಬಿಟ್ಟು ಹೋಗ್ಲಿ, ಎಲ್ಲದ್ಕೂ ಯಡಿಯೂರಪ್ಪಂದೇ ಮಧ್ಯಸ್ತಿಕಿ ಬೇಕು ನೋಡು. ಈ ನನ್ ಮಕ್ಳಿಗೆ ಅವನನ್ನ ಕಾಲ್ ಹಿಡಿದು ಕೆಳಾಕ್ ತಳ್ಳೋತಂಕ ಸಮಾಧಾನ ಇಲ್ಲಾ ನೋಡು!’

ನಂಜ ಸುಮ್ನೇ ಬಿಡೋ ಹಾಗೆ ಕಾಣ್ಲಿಲ್ಲ, ’ಸುಮ್ನಿರ್ರೀ, ಮತ್ತೆ ಯಡಿಯೂರಪ್ಪಾ ಅಪೋಜಿಷನ್ನಿನ್ಯಾಗ್ ಇದ್ದಾಗ್ ಮಾಡಿದ್ದೇನ್ ಮತ್ತೆ, ಅವರ ಮಂತ್ರ ಇವತ್ತು ಅವರಿಗೇ ತಿರುಮಂತ್ರ ಆಗೋದ್ ನ್ಯಾಯಾ ಅಲ್‌ವ್ರಾ?’

’ಅಪೋಜಿಷನ್ನಿನ್ಯಾಗ್ ನಿಂತು ನ್ಯಾಯಾನ್ಯಾಯಾ ಕೇಳ್ಲಿ ಯಾರ್ ಬ್ಯಾಡಾ ಅಂದೋರು, ಅದ್ಯಾವ್ದೋ ಉಡುಪಿ ಶಾಸಕನ ಹೆಂಡ್ತಿ ಎತ್ಲಗೋ ಹೋಗಿ ಸತ್ರೆ ಅದಕ್ಕೂ ಯಡಿಯೂರಪ್ಪ ನೈತಿಕ ಹೊಣೇ ಹೊತ್ಕಂಡ್ ರಾಜೀನಾಮೇ ಕೊಡೋಕೂ ಏನ್ ಸಂಬಂಧಾ ಅಂತೀನಿ...’

’ಅಲ್ಲೇ ವಿಶೇಷ ಇರೋದ್ ನೋಡ್ರಿ ಮೇಷ್ಟ್ರೆ, ಇದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರೋ ಸರ್ಕಾರದ ವ್ಯವಸ್ಥೆ ಅಲ್ಲವ್ರಾ, ಅದರಾಗ ಜನಮನದಲ್ಲಿ ಏನೇ ಇದ್ರೂ ಅದಕ್ಕೆಲ್ಲ ಮುಖ್ಯಮಂತ್ರಿಗಳೇ ಹೊಣೇ, ಹಂಗಾಗಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು, ಮತ್ತೆ ಎಲೆಕ್ಷನ್ನ್ ನಡೀಬೇಕು, ದೊಡ್ಡಗೌಡ್ರ ಬಳಗದವ್ರೋ-ಖರ್ಗೇನೋ ಅಧಿಕಾರಕ್ಕೆ ಬರ್ಬಕು, ಅದೇ ರಾಮರಾಜ್ಯಾ ನೋಡ್ರಿ...’ ಎಂದು ಗಹಗಹಿಸಿ ನಗಲಾರಂಭಿಸಿದ್ದನ್ನು ನೋಡಿ, ಅದರಲ್ಲೂ ಯಡಿಯೂರಪ್ಪಾ ಮತ್ತು ರಾಜೀನಾಮೆ ಅನ್ನೋ ಪದಗಳನ್ನ ಒಂದೇ ವಾಕ್ಯದಲ್ಲಿ ಕೇಳಿ ಮೇಷ್ಟ್ರಿಗೆ ಬಹಳ ಉರಿದುಕೊಂಡು ಹೋಯ್ತು ಅಂತ ಕಾಣ್ಸುತ್ತೆ, ತಮ್ಮ ಕೈಲಿದ್ದ ಛತ್ರಿಯಿಂದಲೇ ನಂಜನನ್ನು ತಿವಿಯುವುದಕ್ಕೆ ಬಂದರೆ ಅವನು ಹೆದರಪುಕ್ಕಲನಂತೆ ಹಿಂದೆ ಸರಿದು ತಪ್ಪಿಸಿಕೊಳ್ಳುವ ಆಟ ಒಂದು ಕ್ಷಣದಲ್ಲಿ ನಡೆಯಿತು.

ನಾನೆಂದೆ, ’ಲೇ ನಂಜಾ, ಯಾಕೋ ನೀನು ಎದ್ದ ಘಳಿಗೆ ನೆಟ್ಟಗಿಲ್ಲ ಇವತ್ತು, ಸೀದಾ ಮನೀಗ್ ಹೋಗು ಇಲ್ಲಾ ಕಷ್ಟಾ ಐತಿ ನೋಡು’ ಎಂದು ನಗುತ್ತ ಗದರಿಸಿದ್ದನ್ನು ನಂಜ ಸೀರಿಯಸ್ಸಾಗಿ ಸ್ವೀಕರಿಸಿ ಮನೆಕಡಿಗೆ ಹೊರಟಾಗ ಬಿಗುವಿನ ವಾತಾವರಣ ತಿಳಿಗೊಂಡಿತು.

Labels: , ,


# posted by Satish : 8:32 pm  3 comments

Sunday, June 01, 2008

ನೂರಾ ಹತ್ತು ಜನ ನೂರಾ ಹತ್ತು ಮಂತ್ರಿಗಳು!

’ಏನ್ ಮೇಷ್ಟ್ರೇ ಇತ್ಲಾಗೆ ಯಡಿಯೂರಪ್ಪ ಅಧಿಕಾರ ಹಿಡ್ದಿದ್ದೇ ತಡಾ ನೀವು ಟ್ರಂಕಿನ್ಯಾಗ್ ಇದ್ದ ಹಳೇ ರೇಷ್ಮೆ ಜುಬ್ಬಾ ತೆಕ್ಕೊಂಡು ಹಾಕ್ಕೊಂಡಿರೋ ಹಾಗಿದೆಯೆಲ್ಲಾ?’ ಎಂದು ತಮಾಷೆ ಮಾಡ್ದೋರು ಯಾರು ಅಂತ ನೋಡಿದ್ರೆ ನಂಜ ಹಲ್ಲು ಗಿಂಜಿಕೊಂಡು ಜಗಲಿ ಮೇಲಿನ ಕಂಭಕ್ಕೊರಗಿಕೊಂಡು ಕುಂತಿದ್ದ.

ನಮ್ಮನೆ ಕಟ್ಟೆ ಮೇಲೆ ಮಧ್ಯಾಹ್ನ ಎರಡೂವರೆ ಎಜೆ ಬಸ್ಸು ಕಾಯೋ ಗಡಿಬಿಡಿಲಿದ್ದ ಮೇಷ್ಟ್ರು ಗಂಭೀರರಾಗೇ ಇನ್ನೂ ಕನ್ನಡಪ್ರಭದೊಳಗೆ ತಮ್ಮ ಮುಖವನ್ನು ಹೂತುಕೊಂಡಿರೋದು ಎಲೆಕ್ಷನ್ನಿನ್ನಲ್ಲಿ ಸೋತ ಗೌಡರ ಬಳಗ ದಿವ್ಯಮೌನವನ್ನು ಧರಿಸಿಕೊಂಡಷ್ಟೇ ಸಹಜವಾಗಿತ್ತು.

’ಏ ನಿಂದೊಳ್ಳೇ, ಯಾವ್ದೋ ಮದ್ವುಗಿ ಹೊಂಟೀನಿ, ಸುಮ್ನಿರು’ ಎಂದು ಮೇಷ್ಟ್ರು ನಂಜನ್ನ ನೋಡಿ ಗದರಿಕೊಂಡ್ರು.

’ನಿಮ್ದೇ ಮಜಾ ಬಿಡ್ರಿ. ಅದ್ಸರಿ, ನೋಡುದ್ರಾ ಇನ್ನೂ ನನ್ ಮಕ್ಳು ಅಧಿಕಾರಕ್ಕ್ ಸೇರಿ ಎಲ್ಡ್ ದಿನ ಆಗಿಲ್ಲ, ಆಗ್ಲೇ ಅವರೊಳಗಿದ್ದ ವಿಷಾ ಎಲ್ಲಾ ಕಾರ್‌ಕೊಂಡ್ ಸಾಯೋಕ್ ಹತ್ತವ್ರೆ, ಇಂಥೋರಿಗೆಲ್ಲ ನಮ್ ದೊಡ್ಡ್ ಗೌಡ್ರು ಥರ ಒಬ್ರು ದೊಣ್ಣೆ ಆಡಿಸ್ಕೊಂಡೇ ಇದ್ದಿದ್ರೆ ಸರಿ ಆಗ್ತಿತ್ತು, ಅಂತೋರ್ ಯಾರಿದಾರ್ ರ್ರೀ, ಯಡಿಯೂರಪ್ಪನ್ ಜೊತೆ?’

’ಇದೆಲ್ಲ ಮಾಮೂಲೀ ಕಣ್ಲಾ, ಅವ್ರು-ಇವ್ರು ಅಧಿಕಾರಕ್ಕೆ ಬಂದ್ರೆ ಎಲ್ರೂ ತಾವ್ ಮಂತ್ರೀ ಮಾಗಧರಾಗ್ ಬೇಕು ಅನ್ನೋದೇ ಕನ್ಸು ಅವ್ರುಗಳ್ದು. ಅವ್ರು ಎಲೆಕ್ಷನ್ನಿಗೆ ಸುರ್ದಿರೋ ದುಡ್ಡು ವಾಪಾಸ್ ಬರಬಕು ಅಂತಂದ್ರೆ ಮಂತ್ರೀನೇ ಆಗ್ಬಕು. ಸುಮ್ಕೆ ಎಮ್ಮೆಲ್ಲೆ ಆಗಿ ವಿಧಾನ ಸೌದ್ದಾಗೆ ಧೂಳ್ ತಿನಕೊಂಡ್ ಬಿದ್ದಿದ್ರೆ ಏನ್ ಪ್ರಯೋಜನ್ ಹೇಳು?’

’ಅಲ್ಲಾ ಸಾರ್, ಹಿಂದೆಲ್ಲಾ ಮಂತ್ರಿಗೊಳು ಅಂದ್ರೆ ಒಂದು ಐದ್ ಸಾರ್ತಿ ನಾದ್ರೂ ಗೆದ್ದು ಬಂದಿರತಿದ್ರು, ಈ ಸರ್ತಿ ಎಲ್ಡೂ-ಮೂರನೇ ಸರ್ತಿ ಗೆದ್ದೋರೂ ಉರಕೊಂಡು ನಿಂತಾರಂತೆ ನಿಜವೇ?’

’ಹೌದಪಾ, ಹೌದು. ಎಲ್ಲವನಿಗೂ ಮಂತ್ರೀ ಪದವಿ ಬೇಕು, ಎಲ್ಲಿಂದಾ ತರಾಣ?’

’ನಾನೊಂದು ಐಡಿಯಾ ಹೇಳ್ಲಾ...’

’...’

’ಇವ್ರು ಗೆದ್ದೋರು ನೂರಾಹತ್ತು ಜನ, ಜೊತಿಗೆ ಸೇರ್ ಕಂಡೋರು ಐದು ಮಂದಿ, ಎಲ್ಲರೂ ಸೇರ್ಕಂಡೇ ಮಂತ್ರಿ ಮಂಡಲ ತುಂಬ್‌ಕ್ಯಂಡ್ರೆ ಹೆಂಗೆ? ಗೆದ್ದೋರೆಲ್ಲ ಮಂತ್ರಿಗಳು, ಯಾವ್ದುರದ್ದು ಎಲ್ಲೀದೂ ಅಂತ ಕೇಳ್ ಬ್ಯಾಡ್ರಿ ಮತ್ತ!’

’ಏ ನಿಂದ್ಯಾವಾಗ್ಲೂ ತಮಾಷೆ ಬಿಡ್ಲೆ’

’ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ...’

ಅಷ್ಟೊತ್ತಿಗೆ ಎಜೆ ಬಸ್ಸು ಬಂತು ಅಂತ ಮೇಷ್ಟ್ರು ಪೇಪರ್ರನ್ನ ಪಕ್ಕಕ್ಕೆ ಎಸೆದು ಒಂದ್ ಕೈಯಲ್ಲಿ ಪಂಚೆ ಹಿಡಕೊಂಡು ಲಗುಬಗೆಯಿಂದ ನಡೆದಿದ್ದು, ಅರ್ಜೆಂಟಿಗೆ ಅಧಿಕಾರ ಸ್ಥಾಪನೆಗೆ ದೊಡ್ಡ ಗೌಡ್ರು ಸ್ಫೀಡಾಗಿ ಬಂದ್ರೇನೋ ಅನ್ನಿಸುವಂತಿತ್ತು. ಮೇಷ್ಟ್ರು ಹೋಗಿದ್ದೇ ಹೋಗಿದ್ದೇ ನಂಜಾ ಅವರು ಬಿಸಾಡಿದ ಪೇಪರನ್ನು ಮೂಸಿಕೊಂಡು ಕುಳಿತ, ನಾನು ಕೆಲಸ ನೋಡಲು ಒಳನಡೆದೆ.

Labels: , ,


# posted by Satish : 12:45 pm  2 comments

Monday, May 12, 2008

ಮಾದೇಶ್ವರಗೆ ಶರಣು ಮಾದೇಶ್ವರ...

”ಹರಿ ಹಯ್ದನೆಂಬೋನು ಮಾದೇಶ್ವರ
ಮಾದೇಶ್ವರಗೆ ಶರಣು ಮಾದೇಶ್ವರ..."


ಎಂಬ ಆರ್ತನಾದ ಹಾಡಿನ ರೂಪದಲ್ಲಿ ನಮ್ಮನೆ ಮುಂದಿನ ಜಗುಲಿ ಮೇಲೆ ಕೇಳಿಬರುತ್ತಿದ್ದುದು ನೋಡಿ ಯಾರೋ ಭಿಕ್ಷುಕರು ಬಂದಿರಬೇಕೆಂದುಕೊಂಡು ಮುಂಬಾಗಿಲು ತೆಗೆದು ನೋಡಿದರೆ ನನ್ನ ಆಶ್ಚರ್ಯಕ್ಕೆ ನಂಜ ಮಧ್ಯದ ಕಂಬಕ್ಕೆ ಒರಗಿಕೊಂಡು ತನ್ನ ಪಾಡಿಗೆ ತಾನು ಹಾಡಿಕೊಳ್ಳುತ್ತಿದ್ದ. ಸ್ವಲ್ಪ ದೂರದಲ್ಲಿ ಕೊಟ್ಟಿಗೆಯಲ್ಲಿ ಕಸ ಹೊಡೆಯುತ್ತಿದ್ದ ತಿಮ್ಮಕ್ಕ ತನಗೇನೂ ಆಗೇ ಇಲ್ಲವೆನ್ನುವಂತೆ ತನ್ನ ಪಾಡಿಗೆ ತಾನಿದ್ದರೆ ಮತ್ತೊಂದು ಕಡೆ ಕೋಡೀಹಳ್ಳಿ ಮೇಷ್ಟ್ರು ಎಲೆಕ್ಷನ್ ಸಂಬಂಧಿ ವಿಷಯಗಳನ್ನು ಪ್ರಜಾವಾಣಿಯಲ್ಲಿ ಬಹಳ ಮುತುವರ್ಜಿಯಿಂದ ಓದಿಕೊಳ್ಳುತ್ತಿದ್ದರು.

’ಏನೋ ನಂಜಾ, ಯಾಕೆ ತಿಂಡೀ ತಿಂದಿಲ್ಲೇನು ಬೆಳಗ್ಗೇ?’ ಎಂದು ಕೇಳಿದ್ದಕ್ಕೆ,
’ಏ, ಸುಮ್ಕಿರ್ರಿ ಸವಕಾರ್ರೇ. ಈಗೆಲ್ಲ ಮಾದೇಶ್ವರನ ದಯೇನೇ ನಮ್ಮ ಪಾಲಿಗೆ ಉಳಿದಿರೋದು, ಅವನ ದಯೆ ಇತ್ತು ಅಂತಂದ್ರೆ ಎಂಥಾ ಬಿರು ಬೇಸಿಗೆಯಲ್ಲೂ ಮಳೆ ಬಂದೀತು!’ ಎಂದು ಯಾವುದೋ ಭ್ರಮಾ ಲೋಕದ ಸಂಭಾಷಣೆಯನ್ನು ಒಪ್ಪಿಸಿದ.
’ಅಲ್ಲಲೇ, ಇನ್ನೂ ಎಲೆಕ್ಷನ್ನಿನ ಮೂರನೇ ಒಂದು ಭಾಗ ಮತ ಚಲಾವಣೆ ನಡೆದಿರೋದಕ್ಕೇ ನೀನು ಇಷ್ಟು ದೊಡ್ಡದಾಗಿ ಹಾಡ್ತಿ, ಇನ್ನೇನಾರಾ ಪುಲ್ ಚುನಾವಣೇನೇ ಮುಗಿದು ನಿನಗೆ ಬೇಕಾದೋರೇ ಗೆದ್ದು ಬಂದ್ರೂ ಅಂತ ತಿಳಕಾ, ಅವಾಗೇನ್ ಮಾಡ್ತೀ?’ ಎಂದು ಪೇಪರಿನ ಹಿಂದೆಯೇ ತಮ್ಮ ತಲೆಯನ್ನಿಟ್ಟುಕೊಂಡೇ ಟೀಕೆ ಮಾಡಿದ ಮೇಷ್ಟ್ರು ಧ್ವನಿ ಅಶರೀರವಾಣಿಯಂತೆ ಕೇಳಿಸಿತು.

ನಂಜ ಇದ್ದೋನು, ’ಮೇಷ್ಟ್ರೇ, ನಿಮಿಗ್ಗೊತ್ತಿಲ್ಲ! ನಮ್ ದೊಡ್ಡ್ ಗೌಡ್ರು ಪರ್‌ಮಾಣಾ ಮಾಡವ್ರೆ, ಅದ್ಯಾರ್ ಯಾರ್ದೋ ಹುಟ್ಟುಡಗಿಸಿ‌ಬಿಟ್ತೀನಿ ಅಂದವರೆ, ಸುಮ್ಮೇ ಬಿಟ್ಟಾರೇನು?’ ಎಂದು ಅವರಿಬ್ಬರ ನಡುವೆ ನಡುಯುತ್ತಿದ್ದ ಶೀತಲ ಸಮರದ ತುಣುಕೊಂದನ್ನು ಹೊರಗೊಗೆದನು. ಮೇಷ್ಟ್ರಿಗೆ ಅಷ್ಟೇ ಸಾಕಾಯಿತೆಂದು ಕಾಣ್ಸುತ್ತೆ, ಪೇಪರನ್ನು ಬದಿಗೆ ಸರಿಸಿ,
’ಯಾವನ್ಲೇ ಇವಾ, ಊರು ಹೋಗೂ ಕಾಡ್ ಬಾ ಅನ್ನೋ ಸಮಯದಾಗ ಊರ ಮಂದೀನ್ ಎದುರ್ ಹಾಕ್ಕ್ಯಬಾರ್ದು ತಿಳಕಾ...ತಮ್ಮ ಕಾಲ ಮುಗೀತು ಅಂತ ಮುಚ್ಚಿಕ್ಯಂಡ್ ಇರಬಕು, ಅದನ್ನ ಬಿಟ್ಟು ಎಲ್ಲಾ ಕಡೀ ತಮ್ಮ ದೊಡ್ಡಸ್ತಿಕೇನ್ ನಡೀಬಕು ಅಂದ್ರ ಹೆಂಗಲೇ?’ ಎಂದು ದೊಡ್ಡ ಪ್ರಶ್ನೆಯೊಂದು ಹಾಕಿದವರ ಹಾಗೆ ನಂಜನ ಮುಖವನ್ನೇ ದುರುಗುಟ್ಟಿ ನೋಡಿದರು.

ಈ ನಂಜನೋ ಗಾಯದ ಮೇಲೆ ಉಪ್ಪು ಸವರೋ ಜಾಯಮಾನದವನು, ’ಮೇಷ್ಟ್ರೇ, ನಿಮಗೇನ್ ಗೊತ್ತು ಬಿಳಿ ಬಟ್ಟೇ ತೊಟ್ಟಗೊಂಡೋರೇಲ್ಲ ಶಾಂತಿಪ್ರಿಯರು ಅನ್ನೋ ಹಂಗ್ ಮಾತಾಡ್ತೀರಲಾ... ನಮ್ ಗೌಡ್ರು ಪ್ರಧಾನಿ ಮಂತ್ರಿ ಆಗಿ ಕೆಟ್ಟ್ರು ಇಲ್ಲಾ ಅಂತಿದ್ರೆ ಇಷ್ಟೊತ್ತಿಗೆ ವರ್ಷದ ಮೇಲ್ ವರ್ಷ ಮುಖ್ಯಮಂತ್ರಿ ಆಗಿ ನಮ್ ರಾಜ್ಯಾನಾ ಅದೆಷ್ಟು ಮುಂದ್ ತರತಿದ್ರೂ ಅಂತೀನಿ. ನಮ್ ರಾಜ್ಯದಾಗ ಯಾವನರ ಒಬ್ನು ದೊಡ್ಡ ಮಟ್ಟದ ರಾಜಕಾರಣಿ ಅನ್ನಂಗಿದ್ರೆ ಅವರೇ ಸೈ’ ಎಂದು ಬಿಡೋದೆ ಮೇಷ್ಟ್ರಿಗೆ ಉರಿ ಹತ್ತಿಕೊಂಡಿದ್ದು ಗ್ಯಾರಂಟಿ ಆಯಿತು, ಇನ್ನೇನು ನಂಜನಿಗೆ ಎದ್ದು ಬಂದು ಹೊಡದೇ ಬಿಡ್ತಾರೋ ಅನ್ನೋ ಅಷ್ಟರಲ್ಲಿ, ದೂರದಿಂದ ಇವರ ಮಾತನ್ನು ಕೇಳುತ್ತಿದ್ದ ತಿಮ್ಮಕ್ಕ ಮಧ್ಯ ಪ್ರವೇಶಿಸಿ,

’ತಮ್ಮಾ, ನಮ್ ರಾಜ್ಯಾನೂ-ದೇಶಾನೂ ಮುಂದು ಬರದು ಅಷ್ಟರಾಗೇ ಐತಿ, ಎದ್ದು ಸ್ವಲ್ಪ ಕರುಗಳ್ ಬಿಟ್ಟು ಕೊಟಿಗಿ ಸ್ವಚ್ಛ ಮಾಡುವಂತಿ ನಡಿ, ಕುಂತ್ರ ತಿಂದಿದ್ದು ಅರಗಂಗಿಲ್ಲ!’

’ನಾ ಬರಂಗಿಲ್ಲಬೇ, ಎಲೆಕ್ಷನ್ನ್ ಮುಗದು ಎಲ್ಲಾ ರಿಜಲ್ಟ್ ಬರಾತಂಕ ನಾ ಬರಂಗಿಲ್ಲ’

’ಹಂಗಂದ್ರ ಕುಂತಗ, ಇವತ್ತು ಎಲೆಕ್ಷನ್ನ್ ನಡೀತತಿ, ಎಲ್ಲಾ ನೆಟ್ಟಗಿದ್ರೂ ಇನ್ನೊಂದು ವರ್ಷದೊಳಗ ಮತ್ತ ಎಲೆಕ್ಷನ್ನ್ ಬರೋ ಪರಿಸ್ಥಿತಿ ಬರ್ತತಿ, ನೋಡ್ಕ್ಯಂತ ಕುತಗ’ ಎಂದು ಕಸಪೊರಿಕೆ ನಿವಾಳಿಸಿ ಮತ್ತೆ ಕೆಲಸದಲ್ಲಿ ತೊಡಗಿದಳು.

ಮೇಷ್ಟ್ರು, ’ತಾಯಿ, ಈ ಎಲೆಕ್ಷನ್ನಿನ ಭರಾಟೇನೇ ತಾಳದಷ್ಟ್ ಆಗ್ಯತಿ, ಮತ್ತೊಂದು ಎಲೆಕ್ಷನ್ ಬರದಂಗಿರ್ಲಪ್ಪಾ ಶಿವನೇ...’ ಎಂದು ಮುಗಿಲಿನ ಕಡೆಗೆ ಮಳೆಯನ್ನು ಯಾಚಿಸುವ ರೈತನಂತೆ ಮುಖ ಮಾಡಿದರು.

ನಂಜ ಮತ್ತೆ ಹಾಡತೊಡಗಿದ,
"ಮಾದೇಶ್ವರಗೆ ಶರಣು ಮಾದೇಶ್ವರ..."

Labels: ,


# posted by Satish : 5:42 am  0 comments

Sunday, December 30, 2007

ಕುಂತೀ ಮಕ್ಕಳಿಗೆ ಎಂದಾರ ಅಧಿಕಾರ ಸಿಕ್ಕತೇನು?

’ಏನ್ ಸಾರ್, ಅಪರೂಪವಾಗೋಯ್ತು ನಿಮ್ಮ ದರುಶನಾ ಇತ್ತೀಚೆಗೆ?’ ಎಂದು ಪ್ರಶ್ನೆ ಕೇಳಿದ್ದು ನಮ್ಮ ಕೋಡೀಹಳ್ಳಿ ಮೇಷ್ಟ್ರುನ್ನ ಕುರಿತೇ. ಒಂದು ಟೈರ್‌ನಲ್ಲಿ ಕಡಿಮೇ ಗಾಳಿ ಇದ್ದೂ ಭರ್ತಿ ಜನರನ್ನು ತುಂಬಿಕೊಂಡ ಲಕ್ಷ್ಮೀ ಬಸ್ಸಿನಂತೆ ಉಸಿರೆಳುದುಕೊಂಡು ನಮ್ಮನೇ ಜಗುಲಿ ಮೆಟ್ಟಿಲನ್ನು ಹತ್ತುತ್ತಿದ್ದ ಮೇಷ್ಟ್ರು ಮುಖದಲ್ಲಿ ಅದ್ಯಾವ ನಗುವೂ ಇರಲಿಲ್ಲ ಅದರ ಬದಲಿಗೆ ದೇವೇಗೌಡರ ಮುಖದ ಅದಮ್ಯ ಶಾಂತಿಯ ಕಳೆ ಇದ್ದ ಹಾಗೆ ಕಂಡು ಬಂತು.

’ಏನಿಲ್ಲ, ಸ್ವಲ್ಪ ಊರ್ ಕಡಿ ಕೆಲ್ಸಿತ್ತು ಹಂಗಾಗಿ ಬರಲಿಲ್ಲ ನೋಡ್ರಿ, ಮತ್ತೆ ಏನ್ ಸಮಾಚಾರಾ, ಎಲ್ಲಾ ಅರಾಮಾ?’ ಎಂದರು.

ಊರುಕಡೆಯ ವಾತಾವರಣ ನಿಜವಾಗಿಯೂ ಮೇಷ್ಟ್ರನ್ನ ಹಣ್ಣು ಮಾಡಿದ್ದು ಹೌದು, ಇಲ್ಲವೆಂದರೆ ಅವರ ಇಳಿ ವಯಸ್ಸಿನಲ್ಲಿಯೂ ಯುವಕರ ಹಾಗೆ ಸದಾ ಕೈಯಲ್ಲಿ ಪ್ರಜಾವಾಣಿಯನ್ನು ಝಳಪಿಸಿಕೊಂಡು ಕುಣಿಯುತ್ತಿರಲಿಲ್ಲವೇ? ಅವರನ್ನು ಮಾತಿಗೆ ಎಳೆಯುತ್ತಾ ನಾನು, ’ನೋಡ್ರಿ, ನಮ್ಮ ರಾಜ್ಯದ ಪರಿಸ್ಥಿತಿ ಎಲ್ಲೀವರೆಗೆ ಬಂದಿದೆ, ಹಿಮಾಚಲ ಪ್ರದೇಶದವರಿಗಿಂತ ಕಡೇ ಅದ್ವಾ ನಾವು?’ ಎಂದು ತಿವಿಯುವಂತೆ ಪ್ರಶ್ನೆಯನ್ನು ಎಸೆದೆ.

ನನ್ನ ಮಾತಿನಿಂದ ಉತ್ತೇಜನಗೊಂಡ ಮೇಷ್ಟ್ರು ರಾಜಕಾರಣದ ಬಗ್ಗೆ ಒಂದಿಷ್ಟು ಮಾತನಾಡುತ್ತಾರೆ ಎಂದುಕೊಂಡರೆ ಠಾಕೂರರ ಆಡಳಿತದಲ್ಲಿ ಸುಭಿಕ್ಷವಾಗಿರುವ ಜನತೆಯ ಪ್ರತಿನಿಧಿಯಂತೆ ಮೇಷ್ಟ್ರು ಠಸ್ಸೂ-ಠುಸ್ಸೂ ಎನ್ನದೇ ಉರಿಯದೇ ಆರಿ ಹೋದ ಸುರುಸುರು ಬತ್ತಿಯಂತಾಗಿದ್ದು ನನಗೆ ನಿಜವಾಗಿಯೂ ಕಳಕಳಿಯನ್ನುಂಟು ಮಾಡಿತ್ತು. ಜೊತೆಗೆ ಇನ್ನೊಂದಿಷ್ಟು ಜನರನ್ನಾದರೂ ಕರೆಸಿ ಮಾತನಾಡಿ ವಿಚಾರಿಸಿಕೊಳ್ಳೋಣವೆಂದರೆ ಈ ಹಾಳಾದ್ ನಂಜನೂ-ತಿಮ್ಮಕ್ಕನೂ ಎಲ್ಲಿಯೂ ಕಾಣಲಿಲ್ಲ. ನಾನು ತಡಮಾಡಿದ್ದನ್ನು ನೋಡಿದ ಮೇಷ್ಟ್ರು, ’ಏನಿಲ್ಲ, ಎಲ್ಲ ಸರಿ ಹೋಗುತ್ತೆ, ಎಲೆಕ್ಷನ್ನ್ ಒಂದು ಬರ್ಲಿ ನೋಡ್ರಿ’ ಎಂದು ಅದೇನೋ ಸತ್ಯವನ್ನು ಬಚ್ಚಿಟ್ಟುಕೊಂಡ ಎಳೆಮಗುವಿನಂತೆ ಮುಖ ಮಾಡಿದರು.

ನಾನು, ’ಅಲ್ಲಾ ಸಾರ್, ಎಂ.ಪಿ.ಪ್ರಕಾಶ್ ದಳ ಬಿಟ್ಟು ಬಿಜೆಪಿ ಸೇರ್ತಾರಂತೆ? ಅದರಿಂದೇನಾದ್ರೂ ಆಗುತ್ತೇನು?

ಮೇಷ್ಟ್ರು, ’ಏ, ಅದರಿಂದ ಏನಾಗ್ತತಿ? ಹೆಗಡೆ, ಸಿದ್ಧರಾಮಯ್ಯ ಮುಂತಾದೋರು ಹೋದ ದಾರಿಗೆ ಪ್ರಕಾಶ್ ಹೋಗ್ತಾರೇ ಅನ್ನೋದನ್ನ ಬಿಟ್ರೆ ನಮ್ಮ ಪದ್ಮನಾಭ ನಗರ ಸಾಹೇಬ್ರನ್ನ ಅಲ್ಲಾಡ್ಸಕೂ ಯಾವನ್ನ್ ಕೈಯಲ್ಲಿ ಆಗಲ್ಲ ಬಿಡ್ರಿ!’ ಎಂದು ದೊಡ್ಡ ಬಾಂಬನ್ನೇ ಸಿಡಿಸಿದರು.

ನಾನು, ’ಅಲ್ಲಾ ಮೇಷ್ಟ್ರೇ, ಗುಜರಾತ್ ಹಿಮಾಚಲ ಪ್ರದೇಶದಾಗ್ ಗೆದ್ದ ಮೇಲೆ ಬಿಜೇಪಿ ನಂಬರ್ ಮ್ಯಾಲಕ್ಕ್ ಹೋಗೈತಂತಲ್ಲಾ...’ ಎನ್ನುವ ವಾಕ್ಯವನ್ನು ಅರ್ಧದಲ್ಲೇ ತುಂಡು ಮಾಡಿ,

’ಏ, ಬಿಡ್ರಿ ನೀವೊಂದು, ಮೊದ್ಲು ಆ ಯಡಿಯೂರಪ್ಪನ್ ಬಂಡಾಯದೋರಿಗೆ ಉತ್ರಾ ಹೇಳಿ ಸುಮ್ನ ಕೂರಸ್ಲಿ ಆಮೇಲ್ ನೋಡೋಣಂತೆ...’ ಎಂದು ಧೀರ್ಘವಾಗಿ ಉಸಿರೆಳೆದುಕೊಂಡು ಮಾತನ್ನು ನಿಲ್ಲಿಸಿದರು.

ನಾನು, ’ಹಂಗಾರೆ ಬಿಜೆಪಿ ಗೆಲ್ಲಂಗಿಲ್ಲಾ ಮುಂದೆ...’ ಎಂದರೆ,

ಮೇಷ್ಟ್ರು, ’ಕುಂತೀ ಮಕ್ಕಳಿಗೆ ಎಂದಾರ ಅಧಿಕಾರ ಸಿಕ್ಕತೇನು?’ ಎಂದು ಅದ್ಯಾವುದೋ ಮಹಾಭಾರತದ ಮೋಡಿಯನ್ನೆರಚಿ ಹೊರಟೇ ಹೋಗಿ ಬಿಟ್ಟರು, ನಾನು ಬಿಟ್ಟು ಕಣ್ಣು ಬಿಟ್ಟು ಅವರು ಹೋದ ದಾರಿಯನ್ನೇ ಯಡಿಯೂರಪ್ಪ ಮುಖ್ಯಮಂತ್ರಿ ಖುರ್ಚಿ ನೋಡುತ್ತಿದ್ದ ಹಾಗೆ ನೋಡುತ್ತಾ ನಿಂತೆ.

Labels: , ,


# posted by Satish : 12:23 pm  3 comments

Wednesday, December 12, 2007

ಆ ವಯ್ಯಾ ಒಂಥರಾ ಸುಟ್ಟಬದನೇ ಕಾಯಿ ಇದ್ದ ಹಾಗೆ...

ಮೇಷ್ಟ್ರು, ತಿಮ್ಮಕ್ಕ, ನಂಜ ಹಾಗೂ ನಾನು ಎಲ್ಲರೂ ಛಳಿಗಾಲದ ರಜೆಗೆ ಗೂಡು ಸೇರಿಕೊಂಡಿದ್ದೇವೆ - ಯಡಿಯೂರಪ್ಪ, ಪಾಪ ಒಂದೇ ವಾರ ಖುರ್ಚಿ ಮೇಲೆ ಕೂತಿದ್ರು ಅಂತ ತಿಮ್ಮಕ್ಕ ಒಂದೇ ಒಂದು ಕಣ್ಣಿನಿಂದ ಅತ್ತಂತೆ ಮಾಡಿದಳು ಎನ್ನುವುದನ್ನು ಬಿಟ್ಟರೆ ಉಳಿದ ನಾವ್ಯಾರು ಅಷ್ಟೊಂದು ತಲೆಕೆಡಿಸಿಕೊಂಡಂತಿಲ್ಲ.

ಮುಂದಿನ ವರ್ಷ ಬರೋ ಚುನಾವಣೆ ಹೊತ್ತಿಗೆಲ್ಲಾ ಛಳಿ ಕಳೆದುಕೊಂಡ ಕರಡೀ ಹಾಗೆ ನಾವೆಲ್ಲ ಮತ್ತೆ ಬರ್ತೀವಿ ನಮ್ಮ ನಮ್ಮ ವರಸೆಗಳನ್ನ ಬಳಸಿಕೊಂಡು ಮಾತನಾಡಲಿಕ್ಕೆ. ಈ ರಾಜ್ಯಪಾಲ ರಾಮೇಶ್ವರ ಠಾಕೂರ್ ಬಗ್ಗೆ ಏನ್ ಬರೆಯೋದು ಆವಯ್ಯಾ ಒಂಥರಾ ಸುಟ್ಟ ಬದನೇಕಾಯಿ ಇದ್ದ ಹಾಗೆ ಅಂತ ನಂಜ ಹೇಳೋದನ್ನ ಕೇಳಿ ನನಗೇ ನಗು ಬಂತು.

ಇನ್ನು ದೊಡ್ಡ ಗೌಡ್ರು ವಿಷ್ಯಾ ಏನ್ ಹೇಳೋಣ ದಿನೇದಿನೇ ಅವರ ನುಣ್ಣನೇ ತಲೆಯ ಹೊಳಪೂ ಹೆಚ್ತಾ ಇರೋದೂ, ದೊಡ್ಡದಾಗಿ ಬೆಳೀತಾ ಇರೋ ಮೂಗಿಗೂ ಹಾಗೂ ಪ್ರಸಕ್ತ ರಾಜಕೀಯ ಸ್ಥಿತಿಗತಿಗೂ ಏನೂ ಸಂಬಂಧವಿಲ್ಲ ಅಂತ ನಾನ್ ಎಷ್ಟು ಸರ್ತಿ ಹೇಳಿದ್ರೂ ಯಾರೂ ನನ್ನ ಮಾತನ್ನ ಕೇಳ್ತಾನೇ ಇಲ್ಲ...

ನೋಡ್ತಾ ಇರಿ, ಮುಂದೇನಾಗುತ್ತೇ ಅಂತ...ಮೇಷ್ಟ್ರು ಎಂದಿನಂತೆ ತಮ್ಮ ಪ್ರಿಡಿಕ್ಷನ್ನ್ ಹುರುಪಿನಲ್ಲಿದ್ರೆ, ನಂಜ ಬಚ್ಚಲು ಮನೆ ಒಲೆಯಲ್ಲಿ ಕಾಲು ಸುಟ್ಟ ಬೆಕ್ಕಿನ ಹಾಗೆ ಕೂತು ಬೀಡಿ ಸೇದ್ತಾ ಇರೋದು ನಿಜವೇ ಹೌದು.

Labels:


# posted by Satish : 12:37 pm  0 comments

Saturday, November 10, 2007

ಕೊನೆಗೂ ಆದ್ಯಲ್ಲಪ್ಪಾ ನಾಯ್ಕಾ...

’ಅಬ್ಬಾ ಬಡ್ಡೀ ಹೈದ್ನೇ, ಕೊನೆಗೂ ಆದ್ಯಲ್ಲಪ್ಪಾ ನಾಯ್ಕಾ’ ಎಂದು ನಂಜ ಉಸಿರು ಬಿಡೋ ಹೊತ್ನಲ್ಲೇ ನಮ್ಮ್ ಮನೇ ಮುಂದೆ ದೇವ್ರು ಬಂದ ಹಾಗೆ ಕೋಡೀ ಹಳ್ಳೀ ಮೇಷ್ಟ್ರು ಪ್ರತ್ಯಕ್ಷಾ ಆಗೋದೇ! ಅದೂ ದೀಪಾವಳಿಯ ವಿಶೇಷಾ ಅನ್ನೋ ಹಾಗೆ ಬೆಳ್ಳಂಬೆಳಗ್ಗೇನೇ ಅಭ್ಯಂಜನ ಮಾಡಿ ಮೇಲಿಂದ ಕೆಳಗ್ಗಿನವರೆಗೆ ಬಿಳೀಬಟ್ಟೆಯನ್ನು ಧರಿಸಿ ಇನ್ನೂ ಮುಖ್ಯಮಂತ್ರೀ ಆಗಿ ಪ್ರಮಾಣವಚನ ಸ್ವೀಕರಿಸದಿದ್ರೂ ಆಗ್ಲೇ ಯಡಿಯೂರಪ್ಪನ ಶಿಷ್ಯರಾದಂಗೆ ಕಾಣ್ತಾ ಇದ್ದರು, ಅಲ್ಲಲ್ಲ ಕಂಗೊಳಿಸುತ್ತಾ ಇದ್ದರು.

ಮೇಷ್ಟ್ರು ಒಳ್ಳೇ ಮೂಡಿನಲ್ಲಿದ್ದಂಗಿತ್ತು, ಸದ್ಯ ನಂಜ ಬಚಾವಾದಾ - ಮೇಷ್ಟ್ರು, ’ಲೇ, ಮೆತ್ತಗ್ ಹೇಳಲೇ, ಗೌಡ್ರು ತಂಡ ಕೇಳ್ಕ್ಯಂಡ್ ಹೊಟ್ಟೇಗಿಟ್ಟೇ ಉರಿಸ್ಕ್ಯಂಡು ಮತ್ತೇ ಯಡ್ಡೀ ಕೆಳಗಿನ ಜಮಖಾನಕ್ಕೇನಾದ್ರೂ ಕೈ-ಗಿಯ್ ಹಾಕಿದ್ರೆ ಕಷ್ಟಾ...’ಎಂದು ಒಂದು ಉಸಿರು ಒಳಗೆಳಕ್ಕೊಳ್ಳಬೇಕು ಎನ್ನುವಷ್ಟರಲ್ಲಿ ನಡುವೆ ಬಾಯ್ ಹಾಕಿ, ’ಅಲ್ಲಾ ಸಾರ್...’ ಎನ್ನುವ ನಂಜನನ್ನೂ ಕೈ ಬಾಯ್ ಸನ್ನೇ ಮಾಡ್ತಾ ನಡುವೆ ನಿಲ್ಲಿಸಿ ಮತ್ತೆ ಮುಂದುವರಿಸಿದರು,

’ನೋಡ್ಲೇ ನಂಜಾ, ಇನ್ನ್ ಮ್ಯಾಲೆ ಶಿಕಾರಿಪುರದ್ ತಾವ ಹೋಗೋ ಹೊತ್ಗೇ ಉಷಾರು ಕಣ್ಲಾ, ಹೇಳೀ ಕೇಳೀ ಸೀ ಎಮ್ ಇರೋ ಊರು, ಈಗಾಗ್ಲೇ ಕುಣೀಯೋ ಹಂಗ್ ಕಾಣಿಸ್ತಿಲ್ಲಾ ನಿನ್ನ್ ಕಣ್ಣಿಗೆ? ಮತ್ತೆ ಯಡ್ಡೀ ಸಾಹೇಬ್ರೂ ನಮ್ಮ್ ಜಿಲ್ಲೇಯೋರು ಕಣ್ಲಾ, ನಾವ್ ಫುಲ್ ಸಪೋರ್ಟು ಕೊಡ್ಬೇಕು ಏನು...’ ಎನ್ನುವಷ್ಟರಲ್ಲಿ ನಂಜನೂ ಅತ್ತ ಕಡೆ ಇದ್ದ ತಿಮ್ಮಕ್ಕನೂ ಒಟ್ಟಿಗೆ ಬಾಯಿ ಹಾಕಿದ್ರು ಅಂತ ಮೇಷ್ಟ್ರು ಒಂದ್ಸರ್ತಿ ಸುಮ್ಮನಾದ ಹಾಗೆ ಕಾಣಿಸ್ತು.

ನಂಜ ಅದ್ಯಾವ್ದೋ ಭಟ್ರು ಮಂತ್ರ ಹೇಳೋ ಹಾಗೆ, ’ಅದಲ್ಲಾ ಸಾರ್, ನಾನು ಹೇಳ್ತಾ ಇರೋದೋ...’ ಎನ್ನುವಷ್ಟ್ರಲ್ಲಿ,
ತಿಮ್ಮಕ್ಕ, ’ಏ ಮೇಷ್ಟ್ರೇ, ಯಡಿಯೂರಪ್ಪನೂ ಮಂಡ್ಯದ ಗಂಡೇ, ಇಲ್ಲಿ ಶಿಕಾರಿಪುರದಾಗ ಮನೇ ಆಳ್ಯಾ ಆಗೋಗಿರೋ ವಿಷ್ಯಾ ಎಲ್ಲಾ ಮರತ್ರಾ?’ ಎಂದು ಮೇಷ್ಟ್ರು ಬಡ ಪಕ್ಕೆಲುಬಿಗೇ ತಿವಿದು ಬಿಡೋದೇ...ಮೇಷ್ಟ್ರು ಮುಖ ಇತ್ತೀಚೆಗಷ್ಟೇ ಪಕ್ಷಾಂತರ ಮಾಡಿ ಕಾಂಗ್ರೇಸಿಗೆ ಹೋಗಿ ಅಲ್ಲಿ ಒಣಗ್ತಾ ಇರೋ ಸಿದ್ದರಾಮಯ್ಯನ ಮುಖವಾದಂತಾಗಿ ಹೋಯ್ತು.

ಮೇಷ್ಟ್ರು ಎಲ್ಲಿ ಬಗ್ತಾರೆ ಬಡಪೆಟ್ಟಿಗೆ, ಮತ್ತೆ ಮುಂದುವರೆಸಿದರು ತಮ್ಮ ಗೆದ್ದೆತ್ತಿನ ಬಾಲವನ್ನು ಹಿಡಿಯೋ ಕಾಯಕ, ’ತಿಮ್ಮಕ್ಕಾ, ಅವ್ರು ನಮ್ಮ್ ಕ್ಷೇತ್ರದಾಗ ಗೆದ್ದಮ್ಯಾಗೆ ಮುಗೀತ್, ಅವ್ರು ನಮ್ಮ್ ಜಿಲ್ಲೇ ಮನುಷ್ಯಾನೇ...ನಮ್ಮ್ ಜಿಲ್ಲೇ ಅಂದ್ರೆ ಏನ್ ಅಂತ ತಿಳಕಂಡೀ ಇವ್ರು ಎಷ್ಟ್ನೇ ಮುಖ್ಯಮಂತ್ರಿ?’

ತಿಮ್ಮಕ್ಕ, ’ಏ ಸುಮ್ಕಿರ್ರೀ, ಎಷ್ಣೇ ಮುಖ್ಯಮಂತ್ರಿ ಆದ್ರೆ ನಮಗೇನು ಸಿಗ್ತತಿ, ಆ ಹಾಳ್ ರಸ್ತೇ ಹೊಂಡಗಳನ್ನ ಯಾವನಾದ್ರೂ ಮುಚ್ಚಿಸ್ತಾನಾ, ಇಲ್ಲಿರೋ ಕೆರೆಕಟ್ಟೇ ಹೂಳನ್ನ ಯಾವನಾದ್ರೂ ತೆಗೆಸ್ತಾನಾ? ಎಲ್ಲಾ ತಮ್ ತಮ್ ಗುಂಡೀ ಮುಚ್ಚೋಷ್ಟು ರೊಕ್ಕಾ ಮಾಡ್ಕಂಡ್ರು - ಈಗಿನ್ ಕಾಲದ್ ತಿಂಗಳ ಲೆಕ್ಕ ದೋಸ್ತೀ ಸರ್ಕಾರಾನಾ ಯಾವಾನಾದ್ರೂ ನ್ಯಂಬಿಕ್ಯಂಡ್ ಬಾಳ್ವೇ ಮಾಡ್ದಂಗೇ ಸೈ!’

ಮೇಷ್ಟ್ರು ಎಲ್ಲಿ ಬಿಡ್ತಾರೆ, ’ಅಲಾಲಾ, ಇಷ್ಟು ದಿನಾ, ಪಾಪ ಯಡ್ಯೂರಪ್ಪಾ ಅಂತಿದ್ದ ನೀನು, ಅದೇನ್ ಇವತ್ತು ನಿನ್ನ ರಾಗಾ ಬದಲಾಯಿಸ್ತಿರೋದು?’ ಎಂದು ಪ್ರಶ್ನೆ ಹಾಕಿ ತಾವು ತೋಡಿದ ಗುಂಡಿಗೆ ತಾವೇ ಬಿದ್ದ ಎಲ್ಲ ಲಕ್ಷಣಗಳನ್ನೂ ತಮ್ಮ ಮುಖದಲ್ಲಿ ಬಿಂಬಿಸತೊಡಗಿದರು.

ತಿಮ್ಮಕ್ಕ, ’ಮತ್ತಿನ್ನೇನು, ಇಷ್ಟು ದಿನಾ ಅವರಿಗೆ ಬಯ್ಯೋ ಜನಗಳು ಇವತ್ತು ಅವರಿಗೇ ಮಣೇ ಹಾಕೋದನ್ನ ನೋಡಿಕ್ಯಂಡ್ ಹೆಂಗ್ ಸುಮ್ನಿರ್ಲೀ!’ಎಂದ ಕೂಡಲೇ ಒಂದು ಮಹಾ ಮೌನ ನೆಲೆಸಿ, ಇಷ್ಟು ಹೊತ್ತು ಅದೇನೋ ಹೇಳಲು ಹಾತೊರೆಯುತ್ತಿದ್ದ ನಂಜನ ಕಡೆಗೆ ನಾವೆಲ್ಲರೂ ಒಟ್ಟಿಗೆ ನೋಡಿದ ಕೂಡಲು ಅವನು ಜೀವ ಬಂದ ಬೊಂಬೆಯಂತಾಗಿ,

’ನಾನು ಹೇಳ್ತಾ ಇದ್ದದ್ದು ಅನಿಲ್ ಕುಂಬ್ಳೇ ಟೆಸ್ಟ್ ಕ್ರಿಕೇಟ್ ಕ್ಯಾಪ್ಟನ್ ಆದ ಬಗ್ಗೆ...’ ಎಂದು ನಿಧಾನವಾಗಿ ರಾಗ ಹೊರಡಿಸಿದ.

ಮೇಷ್ಟ್ರು, ’ಏನೋ, ಅವನೂ ಕನ್ನಡೋನು ತಾನೆ, ಅಷ್ಟು ಸಾಕು ಬಿಡು!’ ಎಂದು ಪೂರ್ಣವಿರಾಮವನ್ನು ಘೋಷಿಸಿ ತಾವು ಧರಿಸಿದ ಬಿಳಿ ಬಟ್ಟೆಗಳ ಒತ್ತಾಯಕ್ಕೆ ಮಣಿದು ಶಾಂತಿಯನ್ನು ಘೋಷಿಸಿದರು. ತಿಮ್ಮಕ್ಕ ಸೆರಗನ್ನು ಕಟ್ಟಿ ಒಳಕ್ಕೆ ನಡೆದಳು.

Labels: ,


# posted by Satish : 2:35 pm  2 comments

Saturday, October 27, 2007

ಡೆಲ್ಲೀ ಮೇಡಮ್ ಚೀನಾಕ್ ಯಾಕ್ ಹೋದ್ಲೂ...

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಕೇಳಿ ನಂಜನಂತೂ ತಂಬಾಕು ತಿಂದ ಮಂಗ್ಯಾನಂತಾಗಿದ್ದ. ಎಡಿಯೂರಪ್ಪನಿಗೆ ಮುಖ್ಯಮಂತ್ರಿ ಪಟ್ಟ ಸಿಗಲಾರದು ಎಂದು ಭವಿಷ್ಯ ನುಡಿದ ಕೋಡೀಹಳ್ಳಿ ಮೇಷ್ಟ್ರು ಬೆರಳು ಕಚ್ಚಿಕೊಳ್ಳುವಂತಾಗಿದ್ದನ್ನು ಕಂಡು ನಂಜನ ಜೊತೆಗೂಡಿದ ನಾನೂ ತಿಮ್ಮಕ್ಕನೂ ಪೇಪರಿನಲ್ಲಿ ಅದೇನು ಬರೆದಿದ್ದಾರು ಎಂದು ಕುತೂಹಲಿತರಾಗಿ ಪೇಪರಿನ ದಾರಿಯನ್ನೇ ನೋಡುತ್ತಿರುವಾಗ ನಮ್ಮನೆಗೆ ಪೇಪರ್ ಹಾಕುವ ಹುಡುಗ ಬಾರದಿದ್ದರೂ ಮೇಷ್ಟ್ರೋ ನಂಜನೋ ಯಾರೋ ಒಬ್ಬರೂ ಅದೆಲ್ಲಿಂದಲೋ ಪ್ರಜಾವಾಣಿಯ ಒಂದು ಪ್ರತಿಯನ್ನು ಕಾತರದಿಂದ ತರಿಸಿಕೊಂಡಿದ್ದರು. ಸದ್ಯಕ್ಕೆ ಪೇಪರಿನ ಎಲ್ಲಾ ಪುಟಗಳೂ ಮೇಷ್ಟ್ರು ಕೈಯಲ್ಲಿದ್ದುದರಿಂದ ನಾವು ಕಾಳನ್ನರಸುವ ಕೋಳಿಗಳಿಗಳಂತೆ ಮೇಲೊಮ್ಮೆ ಕೆಳಗೊಮ್ಮೆ ನೋಡುತ್ತಾ ಮೇಷ್ಟ್ರು ಪ್ರತಿಕ್ರಿಯೆಯನ್ನು ಕಾದುಕೊಂಡಿರಬೇಕಾದರೆ ಕೊನೆಗೂ ಗುಹೆಯ ಬಾಗಿಲಿನಂತೆ ಮೇಷ್ಟ್ರು ಬಾಯಿ ತೆರೆದುಕೊಂಡಿತು.

’ಏನ್ ಹೇಳಾಣ, ಈ ಮುಖಂಡರೆಲ್ಲ ದಿನಕ್ಕೊಂದು ಹೇಳ್ಕೆ ಕೊಟ್ಟು ಯಾರ್ ಯಾರ್ದೋ ಕೈ ಕುಲುಕಿ ಖುರ್ಚೀ ಹಿಡಕೊಂಡಿರಬೇಕಾದ್ರೆ? ನಾನೇನೋ ಎಂಪಿ ಪ್ರಕಾಶ್ ಬರ್ತಾರೆ ಅಂದ್ಕೊಂಡಿದ್ರೆ ಈಗಾಗಿರೋ ಕಥೇನೇ ಬೇರೆ!’ ಎಂದರು.

ಎಲ್ಲರಿಗಿಂತ ಹುರುಪಿನಲ್ಲಿದ್ದ ನಂಜ ಬಾಯಿ ತೆರೆಯುತ್ತಿರುವುದನ್ನು ನೋಡಿಯೂ ನಾನೆಂದೆ, ’ಅಲ್ಲಾ ಮೆಷ್ಟ್ರೇ, ನಿಮಗನಿಸಿತ್ತಾ ಈ ಜನ ಮತ್ತೆ ಬಂದ್ ಸೇರ್ಕೋತಾರೆ ಅಂತ?’

ಮೇಷ್ಟ್ರು, ’ಇಲ್ಲಪ್ಪಾ, ಕನಸು ಮನಸಿನ್ಯಾಗೂ ಕಂಡಿದ್ದಿಲ್ಲಾ, ಯಾರನ್ನು ನಂಬ್‌ಬಕೋ ಬಿಡ್‌ಬಕೋ ಗೊತ್ತಾಗಲ್ಲ ನೋಡ್ರಿ’ ಎನ್ನುತ್ತಾ ಉಸ್ ಎಂದು ಉಸಿರು ಬಿಟ್ಟರು.

ನಂಜ,’ಆಗ್ ಬಕ್ರಿ, ಹಂಗಾs ಆಗ್‌ಬಕು...ಕೊನಿಗೂ ಆ ದೊಡ್ಡ ಗೌಡ್ರು ಮಾತು ನಡೀಲಿಲ್ಲ ಹೊದಿಲ್ಲೋ!’ ಎಂದು ಒಮ್ಮೆ ಕೇಕೆ ಹಾಕಿದಂತೆ ಕಂಡುಬಂದ.

ಮೇಷ್ಟ್ರು, ’ಲೇ ನಂಜಾ, ಕುಂತಲ್ಲೇ ಕೊಸರಾಡ್‌ಬ್ಯಾಡಾ, ಇವೆಲ್ಲ ದೊಡ್ಡ ಸಾಹೇಬ್ರೂ ಪಿತೂರಿ ಇದ್ರೂ ಇರಬಕು...ಯಾವಾಗ್ ತಮ್ಮ ದಳಾನೇ ಬಳಾಬಳಾ ಒಡ್ಯಕ್ ಶುರು ಹಚ್ಚಿಕೊಂತೋ ಆಗ ತಾಗಿರ್‍ಬಕು ಬಿಸಿ ನಿದ್ದೀ ಹೊಡ್ಯಾಕ್ ಕುಂತಿರೋ ಜನಗಳಿಗೆ’

ನಾನೆಂದೆ, ’ನಂಜಾ, ನಿನಗೇನ್ ಗೊತ್ತು ದೊಡ್ಡ ಗೌಡ್ರ ಮರ್ಮಾ, ಈಗ ಕೈ ಕೂಡಿಸ್ತಾರ ಇನ್ನೊಂದು ಸ್ವಲ್ಪ ದಿನದೊಳಗ ಕೈ ಎತ್ತ್‌ತಾರ ನೋಡ್ಕ್ಯಂತಿರು’

ನಂಜ, ’ಇಲ್ರೀ, ಈ ಸರ್ತಿ ಬಾಳಾ ವ್ಯತ್ಯಾಸ್ ಐತಿ... ನಮ್ ರಾಜ್ಯದೊಳಗ ಅಧಿಕಾರ ಸ್ಥಾಪಿಸ್‌ಬಕು ಅಂತ ಕಾಂಗ್ರೇಸ್ ಸಡ್ಡು ಹೊಡೆದು ಕುಂತೈತಂತೆ. ಅದನ್ನ ದೂರಾ ಇಡೋದೇ ಗೌಡ್ರ ಗದ್ಲ. ಯಾವಾನಾರ ಬರ್ಲಿ, ಅದೂ ಎಲೆಕ್ಷನ್ನಿನೊಳಗ ಆಡಳಿತ ಸರ್ಕಾರವಾದ್ರೂ ಬಹುಮತ ಬಾರದ ಕಾಂಗ್ರೆಸ್ಸಿಂದು ಇಂದು ಕೊನೇ ಪ್ರಯತ್ನಾ ನೋಡ್ರಿ’ ಎಂದು ಬೊಬ್ಬೆ ಹೊಡೆದ. ನನಗೂ ನಂಜನ ಥಿಯರಿ ಸರಿ ಎಂದು ತೋರಿತು.

ತಿಮ್ಮಕ್ಕ ಇದುವರೆಗೂ ಯಾವುದೇ ಮಾತನಾಡದೇ ಅಟಲಬಿಹಾರಿ ವಾಜಿಪೇಯಿ ಕಟ್‌ಔಟಿನ ಮುಖ ಹಾಕಿ ಕುಂತಿದ್ದಳು, ಅವಳ ತಲೆಯಲ್ಲಿ ಏನು ಓಡ್ತಾ ಇದೆಯೋ ನೋಡೋಣವೆಂದು, ’ಏನಬೇ ತಿಮ್ಮಕ್ಕಾ ನೀನೇನಂತಿ?’ಎಂದು ಪ್ರಶ್ನೆ ಹಾಕಿ ತಿವಿದೆ.

’ಏನಿಲ್ಲಣಾ, ನನಿಗೆ ಒಂದು ವಿಷ್ಯಾ ಹೊಳೀವಲ್ದೂ, ಆ ಡೆಲ್ಲೀ ವಮ್ಮಾ ಚೀನಾ ದೇಶಕ್ಕ್ ಯಾಕ್ ಹೋದ್ಲೂ, ಅದಕ್ಕೂ ನಮ್ ಧರಮ್ ಅಧಿಕಾರಕ್ಕೂ ಏನ್ ಸಂಬಂಧಾ ಅಂತೀನಿ...’ ಎಂದು ಹೇಳುತ್ತಿದ್ದ ತಿಮ್ಮಕ್ಕನನ್ನು ತಡೆದ ನಂಜ,

’ಅಲ್ಲಿ ಹೋಗಿ ಕಮ್ಮೂನಿಸಮ್ ಬಗ್ಗೇ ಟ್ರೈನಿಂಗ್ ತಗಳಕ್ ಹೋಗ್ಯಾಳಬೇ...’ ಎಂದು ನಕ್ಕ,

ಮೇಷ್ಟ್ರು ’ಅಕಿ ಚೀನಾಕ್ಕಾರೂ ಹೋಗ್ಲಿ, ಟಾಯ್ಲೆಟ್ಟಿಗಾರೂ ಹೋಗ್‌ಕ್ಯಳ್ಳಿ ನಿನಗೇನಾಕತಿ ಅದರಿಂದ?’ ಎಂದು ಗರಮ್ ಆಗಿ ತಿಮ್ಮಕ್ಕನ ಕಡಿ ನೋಡಿದ್ರೋ ನಾನೂ ನಂಜನೂ ಮೇಷ್ಟ್ರು ಮಾತು ಕೇಳಿ ಬಹಳ ಹೊತ್ತು ನಗುತ್ತಲೇ ಇದ್ದೆವು. ತಿಮ್ಮಕ್ಕ ಸುಮಾರಾಯ್ತು ಎಂದು ಎದ್ದು ಒಳಗಡೆ ಹೋದ್ರೆ ಮೇಷ್ಟ್ರು ಪತ್ರಿಕೆಯ ಪುಟಗಳನ್ನು ತಿರುತಿರುವಿ ಹಾಕುತ್ತಲೇ ಇದ್ದರು.

Labels:


# posted by Satish : 1:20 pm  2 comments

This page is powered by Blogger. Isn't yours?

Links
Archives