Saturday, August 12, 2006

ದ್ಯಾವೇ ಗೌಡ್ರು ಶ್ರೀ ಕೃಷ್ಣರಾಗವರಂತೆ!

ಕೊನಿಗೂ ಗೌಡ್ರುದ್ದು ಮರ್ಮಾ ಹೊರಬಿದ್ದೋತಲ್ಲ - ಕುಮಾರ ಕುಸಾ ಮುಗಿಸಲು ಷಡ್‌ಯಂತ್ರ ನಡೆದಿದೆಯಂತೆ, ಅದಕ್ಕೆ ಇವರು ಕಂಡ್‌ಕಂಡೋರ್‌ನೆಲ್ಲ ಬಗ್ಗು ಬಡೀತಾರಂತೆ! ದುಷ್ಟ ಕೂಟದ ಮರ್ದನಾನೂ ಮಾಡ್ತಾರಂತೆ! ಅಯ್ಯೋ, ಹಂಗಾದ್ರೆ ಅವರು ಮನೀ ಬಿಟ್ಟು ಹೋರಗ್ ಹೋಗದೇ ಬ್ಯಾಡಾ, ಎಲ್ಲಾ ದುಷ್ಟರೂ ಅವರ ಮನ್ಯಾಗೆ ತುಂಬಿಕೊಂಡಿಲ್ವಾ? ಅಂತ ಯಾರೋ ಪ್ರಶ್ನೆ ಕೇಳಿ ನಗಾಡ್ತಾ ಇದ್ದಂಗಿತ್ತು.

ಜಾತ್ಯತೀತ ಗುರಿಯ ಹೆಸರಿನ ದೊರೆ, ಹೆಸರಿಗೆ ಗೌಡ, ಮೊನ್ನೆ ಉಪ್ಪಾರ ಜನಾಂಗದವರು ಏರ್ಪಡಿಸಿದ್ದ ಸಮಾವೇಶದಲ್ಲಿ ಆವೇಶವನ್ನು ಕೊಚ್ಚಿಕೊಳ್ತಾ ಇದ್ರಂತೆ. ಒಂದು ಕಡೆ ಗೌಡರು 'ಶ್ರೀಕೃಷ್ಣ'ನಾಗಿ ದುಷ್ಟ ಸಂಹಾರ ಮಾಡಿ ತಮ್ಮ ಕುಮಾರರನ್ನು ಉದ್ದಾರ ಮಾಡುವ ಪಣತೊಟ್ಟಿದ್ದರೆ ಮತ್ತೊಂದು ಕಡೆ ಧರಮ್ ಅಣ್ಣ ಗರಮ್ ಆಗಿ ಶ್ರಾವಣಾ ಮುಗಿಯೋದರೊಳಗೆ ಕಾದಿದೆ ಗೌಡರಿಗೆ ಗಂಡಾಂತರ ಎಂದು ಭವಿಷ್ಯ ನುಡಿದು ಬಿಟ್ಟಿದ್ದಾರೆ. ಮಗನ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳೋದಿಲ್ಲ ಅನ್ನೋ ಅಪ್ಪ, ಈಗ ಮಗನ ರಕ್ಷಣೆಗೇ ಕಂಕಣಬದ್ಧರಾಗಿ ನಿಂತಿರೋದು ಮಜಾ ಅನ್ಸಲ್ಲಾ?

ಎಲ್ಲಾ ಅವನದಯೆ, ಶ್ರೀ ಕೃಷ್ಣ ಪರಮಾತ್ಮ ನೀನು ಏನು ಬೇಕಾದರೂ ಮಾಡು, ಆದರೆ ದೇವೇಗೌಡರ ರೂಪದಲ್ಲಿ ಮಾತ್ರ ಅವತರಿಸಬೇಡ ಪ್ರಭುವೇ, ನಿನ್ನ ನುಣ್ಣನೆ ತಲೆಯನ್ನೂ, ದಪ್ಪನೇ ಮೂಗನ್ನೂ, ಕಂಡಕಂಡಲ್ಲಿ ಮುದ್ದೆ ಬಾಲಿನ ಪರಿಣಾಮದಿಂದ ಗೊರಕೆ ಹೊಡೆಯುವ ಪರಿಯನ್ನು ನೋಡಲಾರೆ ಪ್ರಭುವೇ. ಈ ಭಕ್ತನ ಕೋರಿಕೆಯನ್ನು ಮನ್ನಿಸಲಾರೆಯಾ? ನೀನು ಮತ್ತೊಮ್ಮೆ ಯಾದವನಾಗಿ 'ಲಾಲೂ' ಆದರೂ ಪರವಾಗಿಲ್ಲ (ಯಾಕಂದರೆ ನೀನು ಬಿಹಾರದಲ್ಲಿ ಬಿದ್ದಿರುತ್ತೀಯೆ), ಆದರೆ ಗೌಡನಾಗಿ ಕರ್ನಾಟಕಕ್ಕೆ ಮಾತ್ರ ಬರಬೇಡ, ಗೊತ್ತಾಯ್ತಾ?

# posted by Satish : 8:18 pm
Comments: Post a Comment



<< Home

This page is powered by Blogger. Isn't yours?

Links
Archives