Tuesday, April 10, 2007

ನಮ್ ಲೀಡರುಗಳು ಯಾವಾಗ್ಲೂ ತಮ್ ಕೈ ಮುಂದೆ ತೋರೋದ್ ಯಾಕೋ?

'ಆ ವಾಟಾಳ್ ಕಥೆ ಕಲ್ ಹಾಕ್ತು, ಹೋಗ್ರಿ ನಿಮಗ್ ಮಾಡಕ್ ಬ್ಯಾರೆ ಕೆಲ್ಸಿಲ್ಲ!' ಎಂದು ಯಾವಾಗ ನಂಜ ಕೋಡೀಹಳ್ಳಿ ಮಾಷ್ಟ್ರಿಗೆ ಅಂದನೋ ಆವಾಗ್ಲೇ ನಾನು ಅಂದ್‌ಕೊಂಡಿದ್ದು ಏನೋ ಆಗಬಾರ್ದು ಘನಂದಾರಿ ಕೆಲ್ಸ ಆಗ್ ಹೋಗಿದೇ ಅಂತ.

ಮೇಷ್ಟ್ರು ಅಂದ್ರು 'ಹೋಗಲೇ, ಕನ್ನಡಕ್ಕೊಬ್ಬನೇ ವಾಟಾಳ್ ನಾಗರಾಜ್ ಅನ್ನೋ ಮಾತು ಸುಳ್ಳೂ ಅನ್ನ್‌ಕಂಡಿಯೇನು? ಈ ಮನುಷ್ಯ ಜೀವಂತ ಇರೋದ್ರಿಂದ್ಲೇ ಬೆಂಗ್ಳೂರ್‌ನ್ಯಾಗೆ ಇನ್ನೂ ಕನ್ನಡ ಅನ್ನೋದು ಉಳಕಂಡೈತಿ, ಇಲ್ಲಾ ಅಂದ್ರಿದ್ರೆ ಇಷ್ಟೊತ್ತಿಗೆ ಅಧೋಗತಿಯಾಗ್ ಹೋಗಿರೋದು...'

ನಾನು ಮೈಮೇಲೆ ಬಂದ ಹಾಗೆ ಮಾತನಾಡುತ್ತಿದ್ದ ಮೇಷ್ಟ್ರು ಮಾತನ್ನು ಅರ್ಧದಲ್ಲೇ ತಡೆದು, 'ಸಾರ್, ಯಾವ್ದುರ ಬಗ್ಗೆ ಇಲ್ಲಿ ಮಹಾಸಭೆ ನಡೀತಾ ಇದೆ ಅಂತ ಹೇಳಿದ್ದಿದ್ದ್ರೆ ಎಷ್ಟೋ ಪುಣ್ಯಾ ಬಂದಿರೋದು!' ಎಂದು ಬೇಕಂತಲೇ ತಿವಿಯೋರ ಹಾಗೆ ಮೇಷ್ಟ್ರು ಪಕ್ಕೆಲುಬಿನ ಕಡೆ ಬೆರಳು ತೋರಿದೆ.

ನನ್ನ ಉಳಿವಿಗೆ ಬಂದವನು ನಂಜ, 'ಅದಾ, ಆ ನಾರಾಣ್ ಮೂರ್ತಿ ನಮ್ ರಾಷ್ಟ್ರಗೀತೆ ಬಗ್ಗೆ ಏನೋ ಅಂದೋರೆ ಅಂತ ಸದನದೊಳಗೆ ದೊಡ್ಡ ಕೋಲಾಹಲ ಮಾಡ್ತಾ ಇದಾರಂತ್ರಿ! ಈ ನನ್ ಮಕ್ಳಿಗೆ ಮಾಡಾಕ್ ಬ್ಯಾರೆ ಕೆಲಸಿಲ್ಲ ಅಂತ ತೋರ್ಸೋಕೆ ಇದಕ್ಕಿಂತ ದೊಡ್ಡ ಉದಾಹರ್ಣೆ ಬೇಕೇನೂ...'

ಮೇಷ್ಟ್ರು ಅಷ್ಟೊತ್ತಿಗಾಗಲೇ ಕಾದ ಹೆಂಚಿನಂತಾಗಿ ಹೋಗಿದ್ದರು, 'ದೊಡ್ಡ ಕಂಪ್ನಿ ಇಟ್‍ಕೊಂಡ ಮಾತ್ರಕ್ಕೆ ದೇಶಾನೆ ಕೊಂಡ್‌ಕೊಂಡ್ ಬಿಟ್ತಾರೇನ್ರಿ? ಅವ್ರು ಆಡ್ದಂಗೆ ಕುಣ್ದೂ-ಕುಣ್ದೂ ಎಲ್ರಿಗೂ ಸಾಕಾಗ್ ಹೋಗೈತೆ, ನಮ್ ದೇಶದಾಗೆ ಇರೋಗಂಟ ಎಲ್ರಿಗೂ ಸಲ್ಲಬೇಕಾದ ಗೌರವಾ ಕೊಡಂಗಿದ್ರೆ ಕೊಟ್‌ಗೊಳ್ಳಿ, ಇಲ್ಲಾಂದ್ರೆ ಒಂದಲ್ಲಾ ಒಂದ್ ದಿನ ಗಡೀಪಾರು ಮಾಡಬೇಕಾದೀತು - ಪ್ರಜಾಪ್ರಭುತ್ವ ಅನ್ನೋದೇನು ಇವರ ಬಚ್ಚಲುಮನೆ ಕಲ್ಲೂ ಅಂತ ತಿಳಕಂಡಾರೇನು?'

ನಾನಿದ್ದೋನು, 'ಮೇಷ್ಟ್ರೆ, ಈಗ ಆಗಬಾರ್ದೇನೂ ಆಗಿಲ್ಲವಲ್ಲ, ಮೂರ್ತಿ ಹೇಳ್ಕೆ ನಾನು ನೋಡ್ದೆ ಪೇಪರಿನಲ್ಲಿ ಸರಿಯಾಗೇ ಇದ್ದಂಗಿದೆಯೆಲ್ಲಾ...' ಎಂದೆ, ತನ್ನ ಮರಿಗಳ ಮೇಲೆ ಧಾಳಿ ನಡೆದಿದ್ದನ್ನು ಹತ್ತಿರದಿಂದ ಗಮನಿಸಿದ ಸಿಂಹಿಣಿಯಂತಾಗಿ ಹೋಗಿತ್ತು ಅವರ ಮನಸ್ಸು.

'ನಿಮಗೊತ್ತಿಲ್ಲ ಬಿಡ್ರಿ, ಈ ಪೇಪರಿನೋರು ಬರೆಯೋದೆಲ್ಲ ಸರಿಯಾಗೇ ಇರುತ್ತೇ ಅಂತ ಯಾವ ನನ್ ಮಗ ಹೇಳ್ದ ನಿಮಗೆ?, ಅವರ್ ಪಾಡಿಗೆ ಅವರು ಬರಕಂತಾರೆ...' ಎಂದು ದೊಡ್ಡದೊಂದು ಉಸಿರು ಬಿಟ್ಟರು.

ನಾನು ಮೇಷ್ಟ್ರು ಮೂಡ್ ಇವತ್ತ್ ಯಾಕೋ ಸರಿ ಇಲ್ಲ ಅಂದುಕೊಂಡು, ನಂಜನ ಕಡೆ ತಿರುಗಿ, 'ನಿನಗೆ ವಾಟಾಳ್ ಕಂಡ್ರೆ ಆಗಲ್ಲ ಅಂತ ಗೊತ್ತು, ಆದ್ರೂ ನಮ್ ರಾಷ್ಟ್ರಗೀತೇ ಮೇಲೆ ಅವಮಾನ ಮಾಡ್ದೋರ್ನ ಸುಮ್ನೆ ಬಿಡಕಾಗತ್ತಾ ಅನ್ನೋದು ಮೇಷ್ಟ್ರು ಪ್ರಶ್ನೆ' ಎಂದು ತಿಳಿಹೇಳಲು ನೋಡಿದೆ.

ನಂಜ ಇಷ್ಟೊತ್ತಿನವರೆಗೆ ಸುಮ್ಮನಿದ್ದೋನು, 'ಇವರ್ದೆಲ್ಲಾ ಅಜೆಂಡಾ ಸಾರ್, ನಮ್ ನಿಮ್ಮಂತೋರಿಗೆ ಗೊತ್ತಾಗದಷ್ಟು ಕುತಂತ್ರ ಬುದ್ಧಿ! ನಮ್ ದೇಶದಾಗೆ ನಾರಾಣ್ ಮೂರ್ತಿ ಅಂತೋರ್ ಹೆಚ್ಚಿಗ್ ಆಗಬೇಕು, ಅಂತಾ ಮಹಾನ್ ಲೀಡರುಗಳು ಜಾಸ್ತಿ ಆದ್ರೆನೇ ನೋಡ್ರಿ ಅವಾಗ್ ನಾವ್ ಉದ್ದಾರ ಅಂತ ಆಗದು, ಇಷ್ಟಕ್ಕೂ ಈ ಲೀಡರುಗಳೆಲ್ಲ ತಮ್ ತಮ್ ಕೈ ಮುಂದ್ ಮಾಡಿ ಯಾವಾಗ್ಲೂ ಯಾಕ್ ಮಾತಾಡ್ತಾರೆ ಅಂತ ತಿಳಕಂಡೀರಿ?...'

ಒಂದು ಕ್ಷಣ ಮೌನವನ್ನು ಸಹಿಸಲಾರದವನಂತೆ ಮುಖ ಮಾಡಿ, ನಮ್ಮ ಉತ್ತರಕ್ಕೂ ಕಾಯದೇ...'ಅವರ್ದೆಲ್ಲಾ ಕೈಕಾಲುಗಳು ಮಾತ್ರ ಮುಂದೆ, ಬ್ಯಾರೇರಿಗೆ ಬೆಟ್ ಮಾಡಿ ತೋರಿಸ್ಬಾರ್ದು ಅನ್ನೋದು ಅದರ ಮರ್ಮ, ಯಾವ್ ಮನುಷ್ಯನ ಕೈ ಬಾಯ್ ಮುಂದಿರ್ತತೋ ಅಂತೋರಿಗೆ ಯಾವತ್ತೂ ಸಾವಿಲ್ಲ!' ಎಂದು ತನ್ನದೇ ಆದ ತತ್ವವೊಂದನ್ನು ಮಂಡಿಸಿ ವಾಟಾಳ್ ನಗೆ ಬೀರಿದ, ನಾನೂ ಮೇಷ್ಟ್ರೂ ಅದನ್ನು ಕೇಳಿದರೂ ಕೇಳಿಸದ ಹಾಗೆ ಇದ್ದು ಬಿಟ್ಟೆವು.

# posted by Satish : 5:46 pm
Comments:
ಕಾಳಣ್ಣ,

ಓ ಈ ಅಸಾಮಿ ನಾರಾಣ್ ಮೂತಿ ಸುಮ್ಮಿಗೆ ಇರಕಾಗದೆ ಇರುವೆ ಬಿಟ್ಟುಕೊಂಡರಂಗೆ ಯಾಕಪ್ಪ ಮಾಡಿದ್ದು?

ರಾಷ್ಟ್ರಗೀತೆ ಅಂದರೆ ಎಂತವರಿಗೂ ಪಿರಿತಿ ಇದ್ದೇ ಇರ್ತದೆ.ಅಂತದರಲ್ಲಿ ಅವರ ಫಾರಿನ್ ಕ್ಲೆಂಟ್ಸ್‍ಗೋಸ್ಕರ ಹಿಂಗೆ ಅಂದುಬುಡೋದಾ..ಓ ತೆಗೆ ನನಗೆ ಯಾಕಾ ಸರಿ ಅನಿಸಿಲಿಲ್ಲ..
 
ಶಿವು,

ಅಂದ್ರೆ ನೀವು ಮೇಷ್ಟ್ರು ಪರ ಅನ್ನಿ!
ಈ ನಂಜನ್ನಾದ್ರೂ ಸಮಾಧಾನ ಮಾಡಬೋದು, ಈ ಮೇಷ್ಟ್ರನ್ನ ಸಮಾಧಾನ ಮಾಡೋಕ್ ಸಾಧ್ಯವಿಲ್ಲವಪ್ಪಾ!
 
ಹಂಗಲ್ಲ ಕಣಣ್ಣೋ..
ಆ ಯಪ್ಪಾ ನಾರಾಣಮೂರ್ತಿ ನಮ್ ದೇಸಕ್ಕೆ ಕಿರ್ತಿ-ಹೆಸರು ಎಲ್ಲಾ ತಂದವ್ನೆ..ಆ ಯಪ್ಪನ ಬಾಯಿಯಿಂದ ಇಂತ ಬೇಜವಬ್ದಾರಿ ಮಾತು ಬರ್ತದೆ ಅನ್ನಕೊಂಡಿರಲಿಲ್ಲ..
 
Post a Comment



<< Home

This page is powered by Blogger. Isn't yours?

Links
Archives