Saturday, October 27, 2007

ಡೆಲ್ಲೀ ಮೇಡಮ್ ಚೀನಾಕ್ ಯಾಕ್ ಹೋದ್ಲೂ...

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಕೇಳಿ ನಂಜನಂತೂ ತಂಬಾಕು ತಿಂದ ಮಂಗ್ಯಾನಂತಾಗಿದ್ದ. ಎಡಿಯೂರಪ್ಪನಿಗೆ ಮುಖ್ಯಮಂತ್ರಿ ಪಟ್ಟ ಸಿಗಲಾರದು ಎಂದು ಭವಿಷ್ಯ ನುಡಿದ ಕೋಡೀಹಳ್ಳಿ ಮೇಷ್ಟ್ರು ಬೆರಳು ಕಚ್ಚಿಕೊಳ್ಳುವಂತಾಗಿದ್ದನ್ನು ಕಂಡು ನಂಜನ ಜೊತೆಗೂಡಿದ ನಾನೂ ತಿಮ್ಮಕ್ಕನೂ ಪೇಪರಿನಲ್ಲಿ ಅದೇನು ಬರೆದಿದ್ದಾರು ಎಂದು ಕುತೂಹಲಿತರಾಗಿ ಪೇಪರಿನ ದಾರಿಯನ್ನೇ ನೋಡುತ್ತಿರುವಾಗ ನಮ್ಮನೆಗೆ ಪೇಪರ್ ಹಾಕುವ ಹುಡುಗ ಬಾರದಿದ್ದರೂ ಮೇಷ್ಟ್ರೋ ನಂಜನೋ ಯಾರೋ ಒಬ್ಬರೂ ಅದೆಲ್ಲಿಂದಲೋ ಪ್ರಜಾವಾಣಿಯ ಒಂದು ಪ್ರತಿಯನ್ನು ಕಾತರದಿಂದ ತರಿಸಿಕೊಂಡಿದ್ದರು. ಸದ್ಯಕ್ಕೆ ಪೇಪರಿನ ಎಲ್ಲಾ ಪುಟಗಳೂ ಮೇಷ್ಟ್ರು ಕೈಯಲ್ಲಿದ್ದುದರಿಂದ ನಾವು ಕಾಳನ್ನರಸುವ ಕೋಳಿಗಳಿಗಳಂತೆ ಮೇಲೊಮ್ಮೆ ಕೆಳಗೊಮ್ಮೆ ನೋಡುತ್ತಾ ಮೇಷ್ಟ್ರು ಪ್ರತಿಕ್ರಿಯೆಯನ್ನು ಕಾದುಕೊಂಡಿರಬೇಕಾದರೆ ಕೊನೆಗೂ ಗುಹೆಯ ಬಾಗಿಲಿನಂತೆ ಮೇಷ್ಟ್ರು ಬಾಯಿ ತೆರೆದುಕೊಂಡಿತು.

’ಏನ್ ಹೇಳಾಣ, ಈ ಮುಖಂಡರೆಲ್ಲ ದಿನಕ್ಕೊಂದು ಹೇಳ್ಕೆ ಕೊಟ್ಟು ಯಾರ್ ಯಾರ್ದೋ ಕೈ ಕುಲುಕಿ ಖುರ್ಚೀ ಹಿಡಕೊಂಡಿರಬೇಕಾದ್ರೆ? ನಾನೇನೋ ಎಂಪಿ ಪ್ರಕಾಶ್ ಬರ್ತಾರೆ ಅಂದ್ಕೊಂಡಿದ್ರೆ ಈಗಾಗಿರೋ ಕಥೇನೇ ಬೇರೆ!’ ಎಂದರು.

ಎಲ್ಲರಿಗಿಂತ ಹುರುಪಿನಲ್ಲಿದ್ದ ನಂಜ ಬಾಯಿ ತೆರೆಯುತ್ತಿರುವುದನ್ನು ನೋಡಿಯೂ ನಾನೆಂದೆ, ’ಅಲ್ಲಾ ಮೆಷ್ಟ್ರೇ, ನಿಮಗನಿಸಿತ್ತಾ ಈ ಜನ ಮತ್ತೆ ಬಂದ್ ಸೇರ್ಕೋತಾರೆ ಅಂತ?’

ಮೇಷ್ಟ್ರು, ’ಇಲ್ಲಪ್ಪಾ, ಕನಸು ಮನಸಿನ್ಯಾಗೂ ಕಂಡಿದ್ದಿಲ್ಲಾ, ಯಾರನ್ನು ನಂಬ್‌ಬಕೋ ಬಿಡ್‌ಬಕೋ ಗೊತ್ತಾಗಲ್ಲ ನೋಡ್ರಿ’ ಎನ್ನುತ್ತಾ ಉಸ್ ಎಂದು ಉಸಿರು ಬಿಟ್ಟರು.

ನಂಜ,’ಆಗ್ ಬಕ್ರಿ, ಹಂಗಾs ಆಗ್‌ಬಕು...ಕೊನಿಗೂ ಆ ದೊಡ್ಡ ಗೌಡ್ರು ಮಾತು ನಡೀಲಿಲ್ಲ ಹೊದಿಲ್ಲೋ!’ ಎಂದು ಒಮ್ಮೆ ಕೇಕೆ ಹಾಕಿದಂತೆ ಕಂಡುಬಂದ.

ಮೇಷ್ಟ್ರು, ’ಲೇ ನಂಜಾ, ಕುಂತಲ್ಲೇ ಕೊಸರಾಡ್‌ಬ್ಯಾಡಾ, ಇವೆಲ್ಲ ದೊಡ್ಡ ಸಾಹೇಬ್ರೂ ಪಿತೂರಿ ಇದ್ರೂ ಇರಬಕು...ಯಾವಾಗ್ ತಮ್ಮ ದಳಾನೇ ಬಳಾಬಳಾ ಒಡ್ಯಕ್ ಶುರು ಹಚ್ಚಿಕೊಂತೋ ಆಗ ತಾಗಿರ್‍ಬಕು ಬಿಸಿ ನಿದ್ದೀ ಹೊಡ್ಯಾಕ್ ಕುಂತಿರೋ ಜನಗಳಿಗೆ’

ನಾನೆಂದೆ, ’ನಂಜಾ, ನಿನಗೇನ್ ಗೊತ್ತು ದೊಡ್ಡ ಗೌಡ್ರ ಮರ್ಮಾ, ಈಗ ಕೈ ಕೂಡಿಸ್ತಾರ ಇನ್ನೊಂದು ಸ್ವಲ್ಪ ದಿನದೊಳಗ ಕೈ ಎತ್ತ್‌ತಾರ ನೋಡ್ಕ್ಯಂತಿರು’

ನಂಜ, ’ಇಲ್ರೀ, ಈ ಸರ್ತಿ ಬಾಳಾ ವ್ಯತ್ಯಾಸ್ ಐತಿ... ನಮ್ ರಾಜ್ಯದೊಳಗ ಅಧಿಕಾರ ಸ್ಥಾಪಿಸ್‌ಬಕು ಅಂತ ಕಾಂಗ್ರೇಸ್ ಸಡ್ಡು ಹೊಡೆದು ಕುಂತೈತಂತೆ. ಅದನ್ನ ದೂರಾ ಇಡೋದೇ ಗೌಡ್ರ ಗದ್ಲ. ಯಾವಾನಾರ ಬರ್ಲಿ, ಅದೂ ಎಲೆಕ್ಷನ್ನಿನೊಳಗ ಆಡಳಿತ ಸರ್ಕಾರವಾದ್ರೂ ಬಹುಮತ ಬಾರದ ಕಾಂಗ್ರೆಸ್ಸಿಂದು ಇಂದು ಕೊನೇ ಪ್ರಯತ್ನಾ ನೋಡ್ರಿ’ ಎಂದು ಬೊಬ್ಬೆ ಹೊಡೆದ. ನನಗೂ ನಂಜನ ಥಿಯರಿ ಸರಿ ಎಂದು ತೋರಿತು.

ತಿಮ್ಮಕ್ಕ ಇದುವರೆಗೂ ಯಾವುದೇ ಮಾತನಾಡದೇ ಅಟಲಬಿಹಾರಿ ವಾಜಿಪೇಯಿ ಕಟ್‌ಔಟಿನ ಮುಖ ಹಾಕಿ ಕುಂತಿದ್ದಳು, ಅವಳ ತಲೆಯಲ್ಲಿ ಏನು ಓಡ್ತಾ ಇದೆಯೋ ನೋಡೋಣವೆಂದು, ’ಏನಬೇ ತಿಮ್ಮಕ್ಕಾ ನೀನೇನಂತಿ?’ಎಂದು ಪ್ರಶ್ನೆ ಹಾಕಿ ತಿವಿದೆ.

’ಏನಿಲ್ಲಣಾ, ನನಿಗೆ ಒಂದು ವಿಷ್ಯಾ ಹೊಳೀವಲ್ದೂ, ಆ ಡೆಲ್ಲೀ ವಮ್ಮಾ ಚೀನಾ ದೇಶಕ್ಕ್ ಯಾಕ್ ಹೋದ್ಲೂ, ಅದಕ್ಕೂ ನಮ್ ಧರಮ್ ಅಧಿಕಾರಕ್ಕೂ ಏನ್ ಸಂಬಂಧಾ ಅಂತೀನಿ...’ ಎಂದು ಹೇಳುತ್ತಿದ್ದ ತಿಮ್ಮಕ್ಕನನ್ನು ತಡೆದ ನಂಜ,

’ಅಲ್ಲಿ ಹೋಗಿ ಕಮ್ಮೂನಿಸಮ್ ಬಗ್ಗೇ ಟ್ರೈನಿಂಗ್ ತಗಳಕ್ ಹೋಗ್ಯಾಳಬೇ...’ ಎಂದು ನಕ್ಕ,

ಮೇಷ್ಟ್ರು ’ಅಕಿ ಚೀನಾಕ್ಕಾರೂ ಹೋಗ್ಲಿ, ಟಾಯ್ಲೆಟ್ಟಿಗಾರೂ ಹೋಗ್‌ಕ್ಯಳ್ಳಿ ನಿನಗೇನಾಕತಿ ಅದರಿಂದ?’ ಎಂದು ಗರಮ್ ಆಗಿ ತಿಮ್ಮಕ್ಕನ ಕಡಿ ನೋಡಿದ್ರೋ ನಾನೂ ನಂಜನೂ ಮೇಷ್ಟ್ರು ಮಾತು ಕೇಳಿ ಬಹಳ ಹೊತ್ತು ನಗುತ್ತಲೇ ಇದ್ದೆವು. ತಿಮ್ಮಕ್ಕ ಸುಮಾರಾಯ್ತು ಎಂದು ಎದ್ದು ಒಳಗಡೆ ಹೋದ್ರೆ ಮೇಷ್ಟ್ರು ಪತ್ರಿಕೆಯ ಪುಟಗಳನ್ನು ತಿರುತಿರುವಿ ಹಾಕುತ್ತಲೇ ಇದ್ದರು.

Labels:


# posted by Satish : 1:20 pm
Comments:
ಯಡಿಯೂರಪ್ಪನಿಗೆ ಮತ್ತೆ ಈಗ ಲಕ್ ಬರ್ತಾ ಇರೋ ಹಾಗಿದೆ ನೋಡ್ರಿ . ನೀವೇನಂತೀರಿ ಮೇಷ್ಟ್ರೆ?.
 
ಮೇಷ್ಟು ಯಾಕೋ ಸುಮ್ನಾಗ್ ಬಿಟ್ಟೋರೇ, ನಿನ್ನೆ ಅಂತಾ ಇದ್ರೂ ’ಕುಂತೀ ಮಕ್ಳಿಗ್ ರಾಜ್ಯ ಅನ್ನೋದ್ ಇದ್ಯೇ?’ ಅಂತಾ...ಅದರ ಬಗ್ಗೆ ಇನ್ನೂ ಬರ್ದಿಲ್ಲ. ಯಡ್ ಮುಮ ಆದ್ಮೇಲೆ ಗೊತ್ತು!
 
Post a Comment



<< Home

This page is powered by Blogger. Isn't yours?

Links
Archives