Thursday, September 28, 2006

ನಮ್ ಜಾಗ ನಾವ್ ಮೊದ್ಲು ಉಳಿಸ್ಕ್ಯಂಡ್ ಹಸುರ್ ಮಾಡ್ಬಕು

ಯಾವಾಗ್ ನೋಡಿದ್ರೂ ಕುಸಾ ಸರಕಾರ ಮತ್ತ ರಾಜ್‌ಕಾರಣಿಗಳಿಗೆ ನಾನ್ ಬರೇ ಬಯ್ಯ್‌ತೀನಿ ಅಂತ ಅಂದ್‌ಕಂಡಿದ್ರೆ ಅದನ್ನ ನಿಮ್ಮ್ ಮನಸ್‌ನಿಂದ ತೆಗೆದ್ ಹಾಕ್ರಿ, ಯಾಕ್ ಈ ಮಾತ್ ಅಂತೀನಪಾ ಅಂದ್ರ, ಈ ಕುಸಾ ಸರಕಾರ ಮಾಡಿರೋ ಘನಂದಾರೀ ಕಾರ್ಯದೊಳಗೆ ಈ ಮರಾಠಿ ತೆಕ್ಕಿ ಒಳಗ ಬಿದ್ದಿರೋ ಬೆಳಗಾವಿನ್ಯಾಗ ಮಾಡಿರೋ ಅಧಿವೇಶನಾ ಐತಲ್ಲಾ, ಬಾಳಾ ಶಾಣೇ ಕೆಲ್ಸಾ ನೋಡ್ರಿ ಅದು.

ಸ್ವಲ್ಪ ದಿನದ ಹಿಂದ ನಿಮಗ ಬೆಳಗಾವಿ ಮೇಯರ್ ಮುಸುಡಿಗೆ ಕನ್ನಡದೋರು ಮಸಿ ಬಳ್ದಿದ್ ಗೊತ್ತಿರಾಕ ಬೇಕು, ಅದರ ಹಿನ್ನೆಲಿ ಒಳಗ ಈ ರೀತಿ ಅಧಿವೇಶ್ನಾ ಮಾಡಿದ್ರು ಅಂದ್ರ ನೋಡ್ರಿ ಅವಾಗ ನಮ್ ಜನ ಏನು ಅಂತ ಎಲ್ಲರಿಗೂ ಗೊತ್ತಾಕತಿ. ಅದನ್ನ ಬಿಟ್ಟು ಇವರು ಬೆಂಗಳೂರಿನ್ಯಾಗ ಸೇರಿಕ್ಯಂಬಿಟ್ಟು ಹಂಗಾಗ್ಲಿ, ಹಿಂಗಾಗ್ಲಿ ಅಂತ ಹಾರಾಡಿದ್ರ ಅದರಿಂದೇನಾಕತಿ? ಎಲ್ಲಿ ಸಮಸ್ಯಾ ಐತೋ ಅಲ್ಲೇ ಹೋಗಿ ಬಾಳುವೆ ನಡುಸ್ ಬೇಕಪಾ ಅದೇ ದೊಡ್ಡತನ. ಇಂತಾ ದೊಡ್ಡತನ ಕಂಡಾ ನಾನು ಕುಸಾ ಬಗ್ಗೆ ಒಂದು ಮೆಚ್ಚಿನ್ ಮಾತು ಅಂದ್ರ ನಿಮಗ್ಯಾರಿಗೂ ಬೇಜಾರಂತೀ ಇಲ್ಲ ಹೊದಿಲ್ಲೋ?

ನಮ್ ಕನ್ನಡಾ ಮಂದಿ ಎಲ್ಲ್ ಹೋದ್ರೂ ಕಿತ್ತಾಡೋದ್ ಬಿಡ್ತಾರೇನ್ರೀ? ಅಗಸನ ಕಟ್ಟಿ ಹತ್ಲಿ ಅಮೇರಿಕಾ ಮುಟ್ಲಿ ಜನಾ ಎಲ್ಲಾ ಒಂದಾ, ಇಲ್ಲಾಂತ್ ಅಂದ್ರ ಬೆಳಗಾವಿನ್ಯಾಗಾದ್ರೂ ಇನ್ನೂ ಎರಡ್ ದಿನಾ ಸೆತ ಮುಟ್ಟಿಲ್ಲಾ ಅಷ್ಟೊರಳಗಾ ಕಿತ್ತಾಡೋದು, ಬಡಿದಾಡೋದು, ಕೂಗಾಡೋದು ಅಂದ್ರೇನು? ಮಂಗ್ಯಾನ್ ತಗೋಂಡ್ ಹೋಗಿ ಎಲ್ಲಿ ಇಟ್ರ ಏನ್ ಬಂತು, ಯಾವಾಗ್ ನೋಡಿದ್ರೂ ಇವರ್ದೆಲ್ಲಾ ಒಂದೇ ರಾಗಾ ನೋಡ್ರಿ. ಅದೂ ಅಲ್ದೇ ನೆಟ್ಟಗೆ ಇದ್ದ ಬೆಳಗಾವೀನ ಉಳಿಸ್ಕ್ಯಣಾಕ್ ಬರಂಗಿಲ್ಲ ಇನ್ನ ಕಾಸರ್‌ಗೋಡ್ ಕೇಳ್ತಾರಂತೆ! ಅವರೇನ್ ಮಲಯಾಳೀ ಕುಟ್ಟಿಗಳು ಸುಮ್ನಿರ್‌ತಾರಂತೀರಾ ಮಹಾ ಘಾತಕ ನನ್ ಮಕ್ಳು ಮತ್ತೇನಾರಾ ಒಂದ್ ಕಿತಬಿ ಎಬ್ಬಿಸ್ತಾರಷ್ಟೇ.

ನಿಜಾ ಹೇಳ್ಬಕು ಅಂದ್ರ ನಮ್ ಜಾಗ ನಾವ್ ಮೊದ್ಲು ಉಳಿಸ್ಕ್ಯಂಡ್ ಹಸುರ್ ಮಾಡ್ಬಕು, ನಮ್ ಜನನ್ನ ಚೆನ್ನಾಗಿ ಇಟ್ಕಂಡ್ ಬಂಗಾರ ಬೆಳಿಬಕು, ಅವಾಗ ಕಾಸರ್‌ಗೋಡ್ ಮಂದಿ ತಾವಾ ಹುಡಿಕ್ಕ್ಯಂಡ್ ಬರತಾರ ಕನ್ನಡ್ ನಾಡ, ಅದನ್ನ ಬಿಟ್ಟ್ ಮಂಗ್ಯಾನಂಗ್ ಕಿತ್ತಾಡಿಕ್ಯಂಡ್ ಕುಂತ್ರ ಅಲ್ಲಿರೋ ಕಮ್ಮ್ಯೂನಿಷ್ಟ್ ಅಧಿಕಾರಾನೇ ಚೆಂದಾ ಅಂತ ಅಲ್ಲೇ ಇರತಾರ್ ನೋಡ್ರಿ, ಏನಂತೀರಿ?

# posted by Satish : 10:27 am  2 comments

Friday, September 22, 2006

ಶುದ್ಧ ತರಲೆ ನನ್ ಮಕ್ಳು ನೋಡ್‌ಪಾ

ಸೀತಕ್ಕ ಇನ್ನೆನು ರೊಟ್ಟಿ ತಟ್ಟಿ ಉಣ್ಣಾಕ್ ಕುಂಡ್ರ ಬೇಕೋ ಅನ್ನೋ ಹೊತ್ತಿಗೆ ಹೊರಗಿಂದ್ ನಾಯಿ ಬಗುಳಿದ್ದು ಶಬ್ದಾ ಕೇಳಿ ಬಗ್ಗಿದ ಮೈಯನ್ನು ಇನ್ನಷ್ಟು ಬಗ್ಗಿಸಿ 'ಯಾರೋ ಅದು' ಅಂತ ಕೋಲೂರುತ್ತ ಬಂದಳು, 'ನಾನ್ ಕಣಬೆ' ಎಂದೆ, ನನ್ ಧ್ವನಿಯಿಂದಾದ್ರೂ ಗೊತ್ತ್ ಹಿಡೀಲೀ ಎಂದು, ಗೊತ್ತಾಗೋದೇನು ಎಲ್ಲಾನು ತಿಳಿತತಿ ಈ ಮುದುಕಿಗೆ ಎಂದು ನಾನು ಮನಸ್ಸಿನಲ್ಲಿ ಅಂದ್‌ಕೊಳೋ ಹೊತ್ತಿಗೆ 'ರೊಟ್ಟಿ ತಿನ್ನು ಬಾ' ಅಂದಳು, 'ನಾನೊಲ್ಲೆ, ನೀ ನಡಿ ತಿನ್ ಹೋಗು' ಎಂದು ಒತ್ತಾಯ ಮಾಡಿದ ಮ್ಯಾಗೆ ನನ್ ಮುಂದಾಸಿನೇ ಒಲೆ ಪಕ್ಕ ಕುಂತಗಂಡ್ ಅಷ್ಟಿಷ್ಟು ಹಲ್ಲಿರೋ ಬಾಯಲ್ಲಿ ರೊಟ್ಟಿ ಮುಕ್ಕ ತೊಡಗಿದಳು. ಮಧ್ಯೆ ಅವಳ್ದೂ ಜಿಜ್ಞಾಸೆ ಅಂತ ಕಾಣ್ಸುತ್ತೆ, 'ಅಲ್ಲಾ ತಮ್ಮಾ, ಈ ಟಿವಿನ್ಯಾಗ ಸಿಡಿ-ಪಡಿ ಅಂತ ತೋರುಸ್ತಾರೆ ಅಂತಾರಲ್ಲ, ಹಂಗಂದ್ರೇನು?' ಅಂದಳು. ನಾನು ಎಲ್ಲಿಂದ ಶುರು ಮಾಡ್‌ಬೇಕು ಅಂತಾ ಗೊತ್ತಾಗ್ದೇ ಕಣ್-ಕಣ್ ಬಿಡ್ತಾ ಇದ್ದಾಗ, ಅವಳೇ ಸಹಾಯ ಮಾಡಿದಳು - 'ಅದೇ, ರೆಡ್ಡಿಯಿಂದ ಶುರುವಾಗಿತ್ತಲ್ಲ, ಅದು - ಗೌಡ್ರುದ್ದು ಮಗನ್ನ ಕುರುಚೀಯಿಂದ ಕೆಳಾಕ್ ಇಳಿಸ್ಬೇಕು ಅಂತ ಏನೋ ಆಟ ಕಟ್ಟ್ಯಾರಂತೆ!' ಎನ್ನುವಷ್ಟರಲ್ಲಿ ನಾನು 'ಅದೇನಿಲ್ಲ ಸೀತಕ್ಕಾ, ಈ ನಮ್ ಮುಖ್ಯಮಂತ್ರಿಗೋಳ್ ತಂಡಾ ಗಣಿಗಾರಿಕೆ ಮಾಡೋಕ್ ಹೋಗಿ ಅದೇನೋ ಬಾಳಾ ಪ್ರಮಾಣ್‌ದಾಗ ಲಂಚಾ ತಗಂಡಾರಂತ, ಅದನ್ನ ಸಾಕ್ಷೀ ಸಮೇತಾ ಜನ್ರು ಮುಂದ್ ತಂದ್ ನಿಲ್ಲುಸ್ತವಿ ಅಂತ ಜನರೆದುರು ನಾಟ್ಕಾ ಮಾಡಾಕ್ ಹತ್ಯಾರ, ಅದ್ರ ಸುದ್ದೀನೇ ಈ ಟಿವಿನ್ಯಾಗ ರೆಡಿಯೋದಾಗ ಹಚ್ಚ್ಯಾರ - ಯಾವನಾರ ಲಂಚ ತಗಂಡಿದ್ದು ವಿಡಿಯೋ ತೆಗೆಯೋಕ್ ಆಕತೇನು, ಆದ್ರೆ ಈ ವಿರೋಧ ಪಕ್ಷದೋರ್ ಕಟ್ಟಿರೋ ಕುತಂತ್ರಾ ಅಂತ ಎಲ್ರೂ ಹೇಳ್ತಾರ್ ನೋಡು...' ಎನ್ನುವಷ್ಟರಲ್ಲಿ, 'ಅದು ಸ್ವಲ್ಪ್ ಗೊತ್ತು, ಆದ್ರೆ ಈ ಸಿಡಿ ಅಂದ್ರೇನು ಅಂತ ಗೊತ್ತಿಲ್ಲ ನೋಡು' ಎಂದಳು, 'ಅದಾ, ಏನಿಲ್ಲ, ನಮ್ ಕಾಲದಾಗ ಈ ಕ್ಯಾಸೆಟ್ಟು ಬರತಿದ್ವು ಗೊತ್ತತೋ ಇಲ್ಲೋ, ಅದ್ರ ಬದಲಿಗೆ ಈಗಿನ್ ಕಾಲದಾಗ ತಟ್ಟೀ ಬರತಾವ, ಅದರಾಗ ಎಲ್ಲಾ ಇರತಾವ' ಅನ್ನುವಷ್ಟರಲ್ಲಿ 'ಓ, ಅವೇನು...ಅದ್ಯಾವುದೋ ಸಿನಿಮಾದಾಗ ಬಂದಿತ್ತು...ಸರಿ ಹೋಯ್ತು ಬಿಡು - ಯಾವನಿಗೂ ಕೆಲಸ ಬಗಸಾ ಒಂದೂ ಇಲ್ಲ, ಇಲ್ಲಾ ಅಂದ್ರ ಹಿಂಗ ಯಾವನರ ಮಾಡತಿದ್ನಾ? ಶುದ್ಧ ತರಲೆ ನನ್ ಮಕ್ಳು ನೋಡ್‌ಪಾ...' ಎಂದು ತಲೆ ಬಗ್ಗಿಸಿ ರೊಟ್ಟಿ ಮುರಿಯೋಕ್ ಶುರು ಮಾಡಿದ್ಲು.

ನಾನು 'ಪರಮೇಸಿ ಇದಾನೇನೋ ಅಂತ ಬಂದೆ...' ಎಂದು ಏಳಲು ಹೊರಟೆ, 'ಅವನಾ ಮನಿಗ್ ಬಂದ ಮ್ಯಾಗೇ ಗ್ಯಾರಂಟಿ!' ಎಂದು ತನ್ನ ಕಾಯಕದಲ್ಲಿ ತೊಡಗಿದಳು, ನಾನು ಎಲ್ಲ್ ಹೋದ್ರು ಕುಸಾ ಬೆನ್ನು ಬಿಡದ ಸಿಡಿಗಳ ಬಗ್ಗೇನೇ ಯೋಚಿಸ್ಕಂಡ್ ಮನೀಕಡೆ ಬರತಾ ಇರಬೇಕಾದ್ರೆ - ಈ ಜ್ಯೋತಿಷ್ಯದಲ್ಲಿ ಬಾಳಾ ನಂಬಿಕೆ ಇರೋ ಕುಸಾಗೆ ಹರಿಜನರ ಮನ್ಯಾಗ ಮನಿಗಿದ್ರೆ ಗ್ರಾಚಾರ ಕಡಿಮ್ಯಾಕತಿ ಅಂತ ಯಾವನಾರಾ ಜ್ಯೋತಿಷ್ಯ ಹೇಳಿರ್‍ಬೋದೇನೋ ಅಂತ ಅನುಮಾನ ಬಂತು!

# posted by Satish : 10:20 am  0 comments

Tuesday, September 19, 2006

ದೊಡ್ಡ ಗೌಡ್ರಿಗೆ ಧ್ವನಿ ಬಂದದಂತೆ!

ಸೀತಕ್ಕ ತುಳಸೀಗಿಡಕ್ಕ ನೀರ್ ಹೊಯ್ಯತಾ ಇದ್ದಳಾ, ನಾನು ಹೋದೋನೇ 'ಏನ್ ಸಿತಕ್ಕಾ, ಹೆಂಗಿದ್ದೀ?' ಎಂದಿದ್ದಕ್ಕೆ 'ನಮಿಗೇನ್ ಆಕತೋ ತಮ್ಮಾ, ಅರವತ್ತು ಮುಗಿದ ಮ್ಯಾಕ ಎದ್ದರ ಒಂದ್ ಲೆಕ್ಕ, ಕುಂತರ ಇನ್ನೊಂದರ ಲೆಕ್ಕಾ' ಅಂದಳು. 'ಹಂಗಲ್ಲ ಸೀತಕ್ಕಾ ನಿನಗಾದಂಗ ಎಲ್ಲಾರಿಗೂ ವಯಸ್ಸಾಕತಿ, ಅದನ್ನ ಯಾರೂ ನಿಂದರ್‌ಸಾಕ ಆಗಂಗಿಲ್ಲ' ಎಂದೆ. 'ಸುಮ್ನಿರೋ ಮಾರಾಯಾ, ನಮ್ ಪರಿಪಾಟ್ಲೆ ನಮಿಗೆ, ನಿನಗೇನ್ ಗೊತ್ತಾಕತಿ!' ಅಂದಳು. ನಾನು 'ನೋಡಬೆ, ಈಗ ನಿನ್ ವಾರಿಗಿ ಜನ್ರುನ್ನೇ ತಗಾ ಎಷ್ಟೋ ಮಂದಿ ಇನ್ನೂ ಕಲ್ ಗುಂಡಿನ್ಯಂಗ್ ಹೆಂಗಿಲ್ಲ, ವಯಸ್ಸಾತು ಅನ್ನೋದು ಮನಸ್ನ್ಯಾಗಿಂದ ತೆಗೆದು, ನೆಟ್ಟಗೆ ಓಡಾಡೋದ್ ಕಲಿ' ಎಂದೆ.

ಸೀತಕ್ಕ ಗುರ್ರ್ ಅನಕೊಂಡೇ ಪಡಸಾಲೀ ಮೆಟ್ಟಿಲ ಹತ್ತಿ ಒಳಕ್ಕ್ ಹೋದ್ಲೋ, ಒಳಗಿಂದ ಒಳ್ಳೇ ಗೂಳಿ ನುಗ್ಗಿದಂಗೆ ಪರಮ್ಯಾ ಓಡಿಬಂದ, 'ಏನಣ್ಣೋ, ಎತ್ಲಾಗ್ ಹೊಂಟ್ತು ಸವಾರಿ' ಎಂದವನಿಗೆ, 'ನನ್ದು ಎತ್ಲಾಗೂ ಇಲ್ಲ, ನಿಂದ್ ಯಾವಕಡಿ' ಅಂದೆ. 'ಸುಮ್ನೇ ಟಿವಿ ನೋಡಿ ಬೋರಾತು ಅಂತ ಹೊರಗಡೆ ಹೊಂಟೆ, ಥೂ ಯಾವಾಗ್ ನೋಡಿದ್ರೂ ಈ ಹಾಳಾದ್ ದೊಡ್ಡ ಗೌಡ್ರು ಮಕ್ಳು ಮುಖಾ ತೋರುಸ್ತಾರ್ ನೋಡು!' ಎನ್ನಬೇಕೆ. 'ಅಂತಾದ್ದೇನ್ ನಡೆದೈತೋ ಟಿವಿ ಒಳಗ' ಅಂದಿದ್ದಕ್ಕೆ 'ದೊಡ್ಡ ಗೌಡ್ರಿಗೆ ಈಗ ಧ್ವನಿ ಬಂದದಂತೆ - ಕಾಂಗ್ರೇಸ್ ಮ್ಯಾಕ ಹತ್ತಾರು ಆಪಾದನೆಗೊಳ್ ಪಟ್ಟೀನೆ ತಯಾರ್‌ಸ್ಯಾರಂತೆ, ಒಳ್ಳೇ ಗೂಳಿ ಗುಟುರು ಹೊಡದಂಗ ಮಾತ್ ಮಾತಿಗೆ ಉಸುರು ಬಿಡಾಕ್ ಹತ್ಯಾರಂತೆ!' ಎಂದು ವರದಿ ಒಪ್ಪಿಸಿದ.

'ಏನಾರ ಮಾಡಿಕ್ಯಳ್ಳಿ ಬಿಡು, ನಡೀ ನಾನು ಬಂದೆ ಪೇಟೆ ಕಡೆ ಹೊಂಡೋಣ' ಎಂದು ಜಡವಾದವನನ್ನು ಹೊರಡಿಸಿದೆ. 'ಅಲ್ಲಾ, ಈ ದೊಡ್ಡ ಗೌಡ್ರಿಗೆ ಯಾಕ್ ತನ್ನ್ ಮಕ್ಳು ಉಸಿಸ್‌ಬೇಕು ಅನ್ನೋ ಛಲ?' ಎನ್ನೋ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದವನಾದೆ.

# posted by Satish : 12:39 pm  0 comments

Saturday, September 16, 2006

ನೆಟ್ಟಗೆ ತಮ್ಮದನ್ನ ನೋಡಿಕೊಳ್ಳೋಕ್ ಬರದಿರೋ ಮಂದಿ

ನೀವಾ ನೋಡ್ರಿ, ಇದನ್ನೇ ಅನ್ನೋದು ರಾಜಕಾರಣಾ ಅಂತ, ತಮ್ ಬೆನ್ನು ತಮಿಗೆ ಕಾಣಲ್ಲ ಅನ್ನೋದು ಸುಳ್ಳ್ ಹೆಂಗಾಕತಿ? ಈ ಮನ್ಷಾ ಧರಂ ಸಿಂಗ್ ಇದಾರಲ್ಲ ಮಹಾ ಬೆರಕಿ ಮನುಷಾ ರೀ, ಯಾಕ ಅಂದ್ರ - ತಮ್ಮ್ ಸರಕಾರ ಇದ್ದಾಗ ಅತ್ಲಾಗ್ ಮುನಿಸಿಪಾಲಿಟಿ ಗಟಾರ ಆಗಿ ಹೇಸಿಗೆ ಹೊಡೀತಿತ್ತು, ಅತ್ಲಾಗ ತಮ್ಮ ಜೀವರಗಿ-ಗುಲಬರ್ಗಾ ಕ್ಷೇತ್ರನೂ ಉದ್ಧಾರ್ ಆಗಲಿಲ್ಲ, ಮಧ್ಯದಾಗ ನಾಚಿಗಿ ಮಾನ ಮರ್ಯಾದೆ ಇಲ್ದೋರ್ ಥರಾ ಕುರುಚೀ ಬಿಟ್ಟು ಹೋಗಿದ್ದೂ ಅಲ್ದೇ ಈಗ ನೋಡ್ರಿ ಸುಕಾ ಸುಮ್ನೇ ಕುಸಾ ಸರ್ಕಾರದ್ ಮ್ಯಾಗ ಬೆಟ್ಟ್ ತೋರ್ಸಾಕ್ ಬಂದಾರ. ಅದೇನೋ ಅಂತಾರಲ್ಲ, ತಾನು ಉಣ್ಣೋ ಎಲಿ ಒಳಗ ಕತ್ತಿ ಸತ್ತ್ ಬಿದ್ದತಿ, ಆದ್ರೂ ಮಂದಿ ಎಲ್ಯಾಗಿನ ನೊಣಾ ತೋರ್ಸದ್ ಬಿಡಂಗಿಲ್ಲ ಅಂತ ಹಂಗಾತು ಇವರ ಕತಿ.

ಇವ್ರಿಗ್ ಏನ್ ಬೇಕಾಗತಿ ಗೊತ್ತನು? ಕುಸಾ ಸಾಹೇಬ್ರು ಕಾಲ್ ಹಿಡ್ದು ಎಳೀಬಕು, ಸರ್ಕಾರ ಮುಕ್ ಅಡ್ಯಾಗಿ ಬೀಳ್‌ಬಕು. ಅಮ್ಯಾಕ ಚುನಾವಣೀ, ಮತಾ ಕೊಡ್ರಿ ಅಂತ ಭಿಕ್ಷಾ ಬೇಡ್ ಬಕು, ಮತ್ತ್ ಕಾಂಗ್ರೇಸ್ ಅಧಿಕಾರಕ್ಕ ಬಂದು ಆವಮ್ಮ ಇಟಲಿ ಮಾತಾ ತಾಳಕ್ಕ ಕುಣಿಬಕು.

ಯಾರ್ ಕೊಡತಾರ್ ರೊಕ್ಕಾ? ಈ ಚುನಾವಣೀ ನಡೀತತಲ ಅದೇನ್ ಪುಕ್ಕಟಿ ಆಕತೇನು? ಅದು ನಮ್ ರೊಕ್ಕಾ ಸಾರ್, ಧರಮ್ ಸಾಹೇಬ್ರ ನಿಮ ತಲಿ ಗರಮ್ ಆಗೇತಿ ಅಂತ ನಮಗೂ ಗೊತ್ತದ, ಅದಕ್ಕ ಪೂಜಾರಿ ಹಿಡ್ದು ಕೇಳ್ರಲ, ಯಾಕ್ ಹಿಂಗಾ ಅಂತ, ಅದನ್ನ ಬಿಟ್ಟು ಸರಕಾರಕ್ಕ ಅಡ್ಡಗಾಲ್ ಕೊಟ್ಟು ಕೆಡವ್ ಬೇಡ್ರಪ್ಪೋ. ನಮ್ ರಾಜ್ಯದ ಸರಕಾರ ಅಂದ್ರ ದೇಶ್‌ದಾಗ ಯಾವನೂ ಒಂದ್ ನಾಕಾಣಿ ಬೆಲೀನೂ ಕೊಡದಿರೋ ಪರಿಸ್ಥಿತಿ ಬಂದಿದ್ದೇ ನಿಮ್ಮಿಂದ, ಆವಯ್ಯ ಕೃಷ್ಣಾ ಇರೋ ಮುಂದಾ ಎಷ್ಟೋ ಚೆಂದಿತ್ತು.

ನಾಕ್ ದಶಕಾ ನೀರ್ ಕುಡಿದೀರಿ, ಇಷ್ಟೂ ಗೊತ್ತಾಗಂಗಿಲ್ಲ ಅಂದ್ರೆ ಹೆಂಗ?

# posted by Satish : 2:30 pm  2 comments

Friday, September 15, 2006

ಒಂದಲ್ಲಾ, ಎರಡಲಾ ಮೂರಂತ್ರೀ...

ನಮ್ ಕರ್ನಾಟಕದ ಮಂದೀ ಅಂದ್ರ ಮಹಾ ನಾಟಕದ ಮಂದಿ ನೋಡ್ರಿ, ಅದಕಾ ಐವತ್ತು ವರ್ಷದ ಹಿಂದ 'ಕರ್ನಾಟಕ' ಅಂತ ಹೆಸರು ಇಟ್ಟಾರೇನೋ ಅಂತ ನನಗೂ ಎಷ್ಟೊ ಸರ್ತಿ ಅನುಮಾನ ಬಂದತಿ. ಇಲ್ಲಾ ಅಂದ್ರ ಇವ್ರು ಯಾಕ್ ಹಿಂಗ್ ಆಡತಿದ್ರೂ ಅಂತ ನೀವಾರ ಒಸಿ ಕೇಳ್ರಲ್ಲಾ. ರೆಡ್ಡಿ ಮೊದಲು ಸಿಡಿ ತೋರಿಸ್ತೀನಿ ಅಂತ ಮೂಗಿಗೆ ತುಪ್ಪಾ ಸವರಿ ತನ್ ಕೆಲ್ಸಾ ತಾನ್ ಸಾಧಿಸಿಕಂಡನೋ, ಈಗಂತು ನಾಚಿಗ್ಗೆಟ್ಟೊರ್ ಹಂಗ ಡೈರೆಕ್ಟಾಗಿ ಪತ್ರಿಕ್ ಗಳಿಗೇ ಸಿಡಿ ಹಂಚೋ ವ್ಯವಸ್ಥೆ ನಡದತೇತಂತೆ. ಸ್ವಲ್ಪನಾರೂ ಕಬರು ಅನ್ನದ್ ಬ್ಯಾಡಾ ಇವರಿಗೆ? ಅಲ್ಲಪಾ, ಅಕಸ್ಮಾತ್ ಅದರಾಗ್ ಇರೋದ್ ನಿಜಾನೆ ಅಂತ ಅಂದ್ಕೊಳನಾ, ಈ ಪತ್ರಿಕ್ ಗೊಳಿಗೆ ದಮ್ ಇರತೇತೇನೂ ಅದನ್ನ ಹೆಂಗೈತೆ ಹಂಗೆ ಪಬ್ಲಿಷ್ ಮಾಡಾಕೇ?

ಒಂಥರಾ ಬಾಳಾ ಕ್ರಿಯೇಟಿವ್ ಮಂದಿ ಇವ್ರು ಅನ್ನೋದೇನೋ ನಿಜಾ, ಯಾಕಂದ್ರ ಒಳ್ಳೇದೂ ಕೆಟ್ಟದ್ದು ಎಲ್ಲಾ ಕೂಡೇ ಮಿಕ್ಸ್ ಮಾಡಿ ವಿಡಿಯೋ ತೆಗೆದು ಅದರ ಸಂಭಾಷಣೇ ಸಾರಾನೂ ಬರೆದು ಕೊಟ್ಯಾರಂತ. ನನ್ ಕೇಳಿದ್ರೆ ನೋಡ್ರಿ ಇವರ್ನೆಲ್ಲಾ ಒಟ್ಟಿಗೇ ಸೇರ್ಸಿ ಜೈಲಿನ್ಯಾಗ್ ಕೂಡಬಕು, ಒಂಥರಾ ನಮ್ ಇಂದ್ರಾ ಗಾಂಧಿ ಕೂಡಿದ್ಲಲ್ಲ ೭೭ ರಾಗ, ಹಂಗ.

ದೊಡ್ಡಾ ಗೌಡ್ರು ಬಲಭೀಮನ್ ಥರಾ ಸಡ್ಡು ಹೊಡ್ದು ಹೇಳವ್ರಂತೆ 'ನನ್ ಮಗನ್ ಮುಟ್ಟೋಕ್ ಬಂದೋರ್ ಕಥಿ ಮುಟ್ಟುಸ್ ಬಿಡ್ತೀನಿ' ಅಂತ, ಇತ್ಲಾಗ ಕುಸಾ ಸಾಹೇಬ್ರೂ ಚಪಲ ಚೆನ್ನಿಗಪ್ಪನಿಗೆ 'ಅಯ್ಯೋ, ನಮ್ಮೋರೇ ಬಿಡು...' ಅಂತ ಅಭಯ ಕೊಟ್ಟೋರಂತೆ.

'ಒಂದಲ್ಲಾ, ಎರಡಲ್ಲಾ, ಮೂರಂತ್ರೀ...ಹೊರಗ್ ಬರೋ ಸಿಡಿಗಳು ಎಷ್ಟೇ ಬಂದ್ರೂ ನಮ್ಮನ್ನೇನೂ ಮಾಡಕ್ಕಾಗಲ್ಲ...' ಅಂತ ಯಾರೋ ನಕ್ಕಂಗ್ ಕೇಳ್ತು, ಕುಸಾ ನಮ್ಮನಿ ಒಳಗ ಯಾತಕ್ಕ್ ಬಂದಾರ ಅಂತ ಪೇಪರ್ ಸರಿಸಿ ನೋಡಿದ್ರ, ಅಲ್ಲಿ ಕಂಡೋನು ಇನ್ಯಾರೂ ಅಲ್ಲಾ ನಮ್ ಟೈಲರ್ ಬಾಬಣ್ಣ, ಇವನೊಳ್ಳೇ ಸಮಯಕ್ ಬಂದಾ ಅಂತ 'ಏ ಹೊಸ ಸಿಡಿ ವಿಷ್ಯಾ ನಿನಗೇನಾರಾ ಗೊತ್ತಾ?' ಅಂತ ಕೇಳಿದ್ದಕ್ಕೆ 'ಅಲ್ರೀ ಸವಕ್ಕಾರ್ರೇ, ಅವರಿಗ್ ಕೆಲಸಿಲ್ಲಾ ಅಂತ ನನಗೂ ಕೆಲ್ಸಿಲ್ಲಾ ಅಂತ ತಿಳಕಂಡೀರೇನೂ?' ಅಂತ ನನ್ನೇ ಪ್ರಶ್ನೇ ಕೇಳೋದೇ!

'ಸರಿ ಹೋಯ್ತು, ಹೊಸ ವಿಷ್ಯಾ ತಿಳಕಂಬಕು, ಅದರಾಗೇನ್ ತಪ್ಪು?' ಅಂತ ಸ್ವಲ್ಪ ಗಟ್ಟಿಯಾಗ್ ಕೇಳಿದ್ದಕ್ಕೆ 'ಏ, ನಿಮಗ್ಗೊತ್ತಾಗಂಗಿಲ್ಲ ಬಿಡ್ರಿ' ಅಂತಾ ಅಂದು ಹಿಂತಿರುಗೂ ನೋಡ್ದೇ ಹೋಗೇ ಬಿಟ್ಟ.

# posted by Satish : 12:03 pm  8 comments

Tuesday, September 12, 2006

ಎಲ್ಲಾರ ಮಲಗ್ಲಿ ವಿಧಾನ ಸೌಧ ಒಂದ್ ಬಿಟ್ಟು

ನಮ್ ಕೋಡೀ ಹಳ್ಳಿ ಮೇಷ್ಟ್ರು ಮನಸ್ಥಿತಿ ಒಂಥರಾ ಮಾನ್‌ಸೂನ್ ಮಾರುತ ಇದ್ದಂಗ ಕೆಲವೊಮ್ಮೆ ಇರಚಲ ಹೊಡಿಯಾಕ್ ಹಿಡೀತೂ ಅಂದ್ರ ಆ ವರುಣ ದೇವನ ಅಪ್ಪನಾ ಬಂದ್ ಆಜ್ಞೆ ಕೊಟ್ರೂ ನಿಂದರವಲ್ತು, ಅಂಥದ್ದು. ಕೆಲವೊಮ್ಮೆ ಕುಸಾ ಸರ್ಕಾರದ ಸಾಧನಿ ನೋಡೀ ಹೊಗಳಿದ್ದೇ ಹೊಗಳಿದ್ದು, ಇನ್ನು ಕೆಲವು ಸರ್ತಿ ತೆಗಳೋದು ಅಂದ್ರ ಬೈಗಳಿಗೂ ನಾಚಿಗ್ಯಾಕಬೇಕು ಹಂಗ.

ನಾವೂ-ಅವರೂ ಸುಮ್ನೇ ಕೂಡಿ ಹರಟೀ ಹೊಡಕೊಂತ ಕುಂತಿದ್‌ವ್ರಾ, ಅಷ್ಟೋತ್ತಿಗೇ ಮುಂಜಾನಿ ಪೇಪರ್ ಸ್ವಲ್ಪ ತಡಾ ಆತು ಅಂತ ಮಟಮಟ ಮಧ್ಯಾಹ್ನಕ್ಕೆ ಬರೋದೆ! ಅದೂ ಹೇಳೀ-ಕೇಳಿ ತನ್ನ ಮುಖದ ಮ್ಯಾಗೆ ಯಾರ್ ಯಾರು ಎಲ್ಲೆಲ್ಲಿ ಮಲಗ್ಯಾರ ಅನ್ನ ಲೆಕ್ಕ ಇಟಗೊಂಡು. ಅದನ್ನ ನೋಡತ್ತಿದ್ದಂಗ ಮೇಷ್ಟ್ರ ಬಿಪಿ ಸುರ್ ಅಂತ ರೈಸ್ ಆತ್ ನೋಡ್ರಿ, ಶುರು ಹಚ್ಚಿಗ್ಯಂಡ್ರು... 'ತಗಳಪ್ಪಾ ದೊಡ್ಡ ಗೌಡ್ರು ಮಗನ್ನ ಮನೀ ಇಂದ ಹೊರಗ ದಬ್ಬಿದರೂ ಅಂತ ಈ ಮನ್ಷಾ ಮುಖ್ಯಮಂತ್ರಿಗಾದ್ರೂ ಸ್ವಲುಪ ತಲೀ ಅನ್ನಾದ್ ಬ್ಯಾಡಾ, ಕಂಡ ಕಂಡಲಿ ಮನಗ್ಯಾರಂತ ಕುಸಾ ಸಾಹೇಬ್ರೂ - ಬರೀ ಮನಗಿದ್ರೆ ಸಾಕಾ, ಎಚ್ಚೆತ್ತು ದೇಶ ಉದ್ದಾರ ಮಾಡಬೇಕಲೇ, ಮಂಗ್ಯಾನ್ ಮಗನಾ...' ಅಂತ ಕುಸಾ ಹೆಸರಿನಾಗ ಅವರ ಅಪ್ಪನ್ನೂ ಮಂಗ್ಯಾ ಅಂತ ಬೈದಿದ್ದೂ ಅಲ್ದೇ, ಅಪ್ಪನ ಹಂಗಾ ನಿದ್ದೀ ಮಾಡೋ ಸಂತಾನ ಅಂತ ಒಳ್ಳೇ ಶ್ಯಾಲ್ಯಾಗ ಮಕ್ಕಳಿಗೆ ತಿವಿದಂಗ ತಿವಿದಿದ್ದನ್ನ ನೋಡಿ ನನಗಂತೂ ತಡೀಲಾರ್ದ ನಗೂ ಬಂತು. ಇನ್ನು ಜೋರಾಗಿ ನಕ್ರ ನನಗೂ ಒಂದಿಷ್ಟು ಬಿದ್ದೀತು ಬೈಗುಳ ಅಂತ ಸುಮ್ಮಕಿದ್ದೆ, ಮೇಷ್ಟ್ರು ಮತ್ತ ಶುರು ಹಚ್ಚಿಗಂಡ್ರು, 'ಯಾವ್ ಯಾವನು ಎಲ್ಲೆಲ್ಲಿ ಇರಬಕೋ ಅಲ್ಲೇ ಇದ್ರೇನೇ ಚೆಂದ, ಒಳ್ಳೇ ಮಣ್ಣಿನ್ ಮಕ್ಳು ಮಣ್ಣಿನ್ ಮಕ್ಳು ಅಂತ ಆಡಿಕ್ಯಂಡು ಹಳ್ಳೀ ಹಾಳ್ ಮಾಡ್ತಾರೇ ವಿನಾ ಇವರು ಕಾಲಿಟ್ಟ ಊರು ಉದ್ದಾರಾದಂಗಿಲ್ಲ, ಇಲ್ಲಾ ಅಂದ್ರೆ ಆ ಹಾಸ್ನ ಬಸ್‌ಸ್ಟ್ಯಾಂಡ್ ಯಾಕ್ ಹಂಗ್ ಹೊಲಸು ನಾರ್‍‌ತಿತ್ತೂ? ಮೊದ್ಲು ಮನಷಾ ಅಂತ ಆದವನು ಮನುಷ್ಯತ್ವಾ ಕಲಿಬಕು, ಅಮ್ಯಾಕ ರಾಜಕೀಯ ಮಾಡಬಕು...' ಎಂದು ಇನ್ನೇನನ್ನೋ ಹೇಳುವವರನ್ನು ತಡೆದು ಮೇಷ್ಟ್ರೇ, 'ಎಲ್ಲೆಲ್ಲಿಂದ ಎಲ್ಲಿಲ್ಲಿಗೋ ಹೋತು...' ಅಂತ ತಿವಿದಿದ್ದಕ್ಕೆ 'ನಮ್‌ಗ್ಯಾತಕ್ಕ ಈ ನನ್ ಮಕ್ಳು ಸವಾಸ, ಎಲ್ಲಾರ ಮಲಗ್ಲಿ ವಿಧಾನ ಸೌಧ ಒಂದ್ ಬಿಟ್ಟು...' ಎಂದು ಮೂಗಿನ ಮ್ಯಾಗಿನ ಕನ್ನಡಕ ಇನ್ನಷ್ಟು ಏರಿಸಿ, ಏನೂ ಆಗೇ ಇಲ್ಲ ಅನ್ನೋರಂಗೆ ಪೇಪರಿನ ಮುಂದಿನ ಪುಟ ತಿರುಗಿಸಿಕ್ಯಂಡು ಓದೋ ಮೇಷ್ಟ್ರಿಗೆ ಇನ್ನೂ ರಿಟೈರ್ ಯಾಕ್ ಆಗಿಲ್ಲ ಅಂತ್ ಯೋಚಿಸೋ ಹಂಗ್ ಆತ್ ನೋಡ್ರಿ.

# posted by Satish : 11:52 am  0 comments

Friday, September 01, 2006

ಸಿದ್ರಾಮಣ್ಣಂಗ್ ಇಷ್ಟೂ ತಿಳಿಯಾಕಿಲ್ವಾ?

ಕುಸಾ ಹೋಗಿ ಹೋಗಿ ಚಿಕ್ಕಕಾನ್ಯದ ಶಾಲೀ ಒಳಗ ಮಲಗ್ಯಾರಂತ್ ರೀ ಅಂತ ನಮ್ ಪಕ್ಕದ್ ಮನೆಯೋರು ಮಾತಾಡಿಕೊಳ್ತಿದ್ರು ರೀ...ಅದೇ ಸಮಯಕ್ಕಾ ಸಿದ್ರಾಮಣ್ಣಂದೂ ಒಂದ್ ಕಾಮೆಂಟ್ ಅಂತ್ ರೀ 'ರಾಜ್ಯದೊಳಗಾ ೨೯ ಸಾವಿರ ಹಳ್ಳಿ ಇದಾವು, ಅದರಾಗೆಲ್ಲ ಕುಸಾ ಮಲಗಕ್ಕಾಗಂಗಿಲ್ಲ, ಹಂಗ್ ಮಲಗಿದ್ರೂ ಉದ್ದಾರಾಗಂಗಿಲ್ಲ...'. ನಮ್ ಊರಾಗ ರಸ್ತಿಗಳು ದುರಸ್ತಿ ಆಗೋವು ಅಂದ್ರೆ ಯಾರಾದ್ರೂ ಮಿನಿಷ್ಟ್ರು ಬಂದಾಗ್ ನೋಡ್ರಿ. ಕೊನೀ ಪಕ್ಷ ಇಡೀ ಚಿಕ್ಕಕಾನ್ಯ ಉದ್ದಾರಾದಿದ್ರೂ ಆ ಶಾಲೀ ತಲೀ ಮ್ಯಾಗ ಕಿತ್ತೋಗಿರೋ ಹಂಚಾದ್ರೂ ಹೊಸತಾಗಿರ್ತಾವಾ? ಸಿದ್ರಾಮಣ್ಣಂಗ್ ಅಷ್ಟೂ ಗೊತ್ತಾಗಂಗಿಲ್ಲಾ ಅಂದ್ರೆ?

ಕುಸಾ ಬದ್ಲಿಗೆ ದೊಡ್ಡ ಗೌಡ್ರು, ಅವರ ಕುಟುಂಬಾ ಎಲ್ಲಾನೂ ಹೋಗಿ ದಿನಾ ಒಂದೊಂದ್ ಶಾಲೀ ಒಳಕ ಅಥ್ವಾ ಹೊರಕ್ ಯಾಕ್ ಮನುಗ್‌ಬಾರ್ದೂ? ಬಡ ಮಕ್ಳು ಸ್ಕೂಲ್ ಸಾಕಾಗ್ದೇ ಹೋದ್ರೆ ಬೇಕಾದ್ರೆ ಬಸ್‌ಸ್ಟ್ಯಾಂಡ್‌ನ್ಯಾಗ್ ಮಲ್ಲಕ್ಕಳ್ಳಿ, ಏನಂತೀರಿ? ನಿಮ್ ಬಸ್‌ಸ್ಟ್ಯಾಂಡು, ಸ್ಕೂಲಿನ್ಯಾಗೆ ಜಾಗಾ ಇಲ್ಲಾ ಅಂದ್ರ ಮೊದಲಾ ಹೇಳ್ರಪಾ, ಯಾಕಂದ್ರ ಈ ಗೌಡ್ರ ಪರಿವಾರ ಬಾಳಾ ದೊಡ್ಡದದಾ.

# posted by Satish : 9:55 am  0 comments

This page is powered by Blogger. Isn't yours?

Links
Archives